ಪ್ರಕಾಶ್ ಗೆ ಮುಖ್ಯಮಂತ್ರಿ ಪಟ್ಟ:ಕುಮಾರಸ್ವಾಮಿ ಹೊಸ ರಾಗ
ಬೆಂಗಳೂರು, ಅ.27 : ಯಾವ ಪಕ್ಷ ಒಡೆಯುತ್ತದೆಯೋ ಗೊತ್ತಿಲ್ಲ, ಒಟ್ಟಿನಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲಿ ಗುಂಪುಗಾರಿಕೆ ಆರಂಭವಾಗಿದೆ. ಈ ಮೂರು ಪಕ್ಷಗಳಲ್ಲೂ ಸರ್ಕಾರ ರಚನೆಗೆ ಒಂದು ಗುಂಪು, ಚುನಾವಣೆಗೆ ಇನ್ನೊಂದು ಗುಂಪು ಒಲವು ವ್ಯಕ್ತಪಡಿಸಿವೆ. ಈ ಮಧ್ಯೆ ಹೊಸ ಸರ್ಕಾರ ರಚಿಸುವ ಕಸರತ್ತನ್ನು ಎಂ.ಪಿ.ಪ್ರಕಾಶ್ ನವದೆಹಲಿಯಲ್ಲಿ ಶನಿವಾರ(ಅ.27)ವೂ ಮುಂದುವರೆಸಿದ್ದಾರೆ.
ಎಂ.ಪಿ.ಪ್ರಕಾಶ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವುದಾಗಿ ಕಾಂಗ್ರೆಸ್ ಘೋಷಿಸಿದರೆ, ಜೆಡಿಎಸ್ ಸರ್ಕಾರ ರಚನೆಗೆ ಬೇಷರತ್ತು ಬೆಂಬಲ ನೀಡಲಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮಗನ ಹೇಳಿಕೆಗೆ ವ್ಯತಿರಿಕ್ತವಾಗಿ ದೇವೇಗೌಡರು ವರ್ತಿಸುತ್ತಿದ್ದಾರೆ. ಪ್ರಕಾಶ್ ಅವರಿಂದ ದೇವೇಗೌಡರು ಮತ್ತಷ್ಟು ದೂರ ಉಳಿದಿದ್ದಾರೆ. ದೆಹಲಿಯಲ್ಲಿಯೇ ಉಳಿದಿರುವ ದೇವೇಗೌಡರು, ಪ್ರಕಾಶ್ ನಡೆಗಳ ಮೇಲೆ ಕಣ್ಣಿಟ್ಟಿದ್ದಾರೆ.
ತಮ್ಮ ಸೂಚನೆ ಧಿಕ್ಕರಿಸಿದ ಪ್ರಕಾಶ್ ಬಗ್ಗೆ ಗೌಡರಿಗೆ ಸಿಟ್ಟಿದೆ. ಪ್ರಕಾಶ್ ಹಿಂದೆ ಎಷ್ಟು ಜನ ಶಾಸಕರಿದ್ದಾರೆ ಎಂಬುದರ ಮೇಲೆ, ಹೊಸ ಸರ್ಕಾರ ರಚನೆ ನಿಂತಿದೆ. ಈಗಾಗಲೇ ರಾಜು ಗೌಡ, ಬಾಲರಾಜು, ಮಲ್ಲಿಕಾರ್ಜುನ ಕೂಬಾ, ಅಮರೇಗೌಡ ಬಯ್ಯಾಪುರ, ಬಿ.ಸಿ.ಪಾಟೀಲ್ ಸೇರಿದಂತೆ 14ಶಾಸಕರು ಪ್ರಕಾಶ್ ಜೊತೆ ಗುರ್ತಿಸಿಕೊಂಡಿದ್ದು, ದೆಹಲಿಯಲ್ಲಿ ಪ್ರಕಾಶ್ ಜೊತೆ ಇದ್ದಾರೆ.
ಡೆಲ್ಲಿ ಯಾತ್ರೆಗೆ ಮುನ್ನ ಸಿದ್ದರಾಮಯ್ಯ ಜೊತೆ ಭೇಟಿ ಮಾಡಿರುವ ಎಂ.ಪಿ.ಪ್ರಕಾಶ್, ಅ.29ರಂದು ಸೋನಿಯಾ ಅವರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ನವೆಂಬರ್ ವೇಳೆಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.
ಇತ್ತ ಬಿಜೆಪಿಯಲ್ಲಿ ಜೆಡಿಎಸ್ ಜೊತೆ ಮರು ಮೈತ್ರಿ ಮಾಡಿಕೊಳ್ಳುವ ಆಸೆ ಇನ್ನೂ ಜೀವಂತವಾಗಿದೆ. ಆರೆಸ್ಸೆಸ್ ನಾಯಕರು ಶುಕ್ರವಾರ ರಹಸ್ಯ ಸ್ಥಳದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ಮಾತುಕತೆ ಫಲಕಾರಿಯಾಗಿಲ್ಲ ಎನ್ನಲಾಗಿದೆ. ಶನಿವಾರ ವೆಂಕಯ್ಯ ನಾಯ್ಡು ಬೆಂಗಳೂರಿಗೆ ಆಗಮಿಸಲಿದ್ದು, ಪಕ್ಷದ ಮುಖಂಡರೊಂದಿಗೆ ಅವರು ಚರ್ಚೆ ನಡೆಸಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)