ರಾಜಭವನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಕಲರವ
ಬೆಂಗಳೂರು, ಅ.27 : ನಾಟಕೀಯ ಬೆಳವಣಿಗೆಯೊಂದರಲ್ಲಿ ಭಾರತೀಯ ಜನತಾ ಪಕ್ಷವನ್ನು ಮತ್ತೊಮ್ಮೆ ಜೆಡಿಎಸ್ ಶನಿವಾರ(ಅ.27) ಅಪ್ಪಿಕೊಂಡಿದೆ. ಕಾಂಗ್ರೆಸ್ ಅಧಿಕಾರ ಹಿಡಿಯುವುದನ್ನು ತಪ್ಪಿಸಲು, ಜೆಡಿಎಸ್ ಈ ನಿರ್ಣಯಕ್ಕೆ ಬಂದಿದೆ. ರಾಜಭವನಕ್ಕೆ ತೆರಳಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು, ಸರ್ಕಾರ ರಚನೆಗೆ ಅವಕಾಶ ಕೋರಿದ್ದಾರೆ.
ಮುಖ್ಯಮಂತ್ರಿಗಳ ಅತಿಥಿ ಗೃಹದಲ್ಲಿ ಜೆಡಿಎಸ್ ಶಾಸಕರು, ಬಿಜೆಪಿ ಬೆಂಬಲಿಸುವ ತೀರ್ಮಾನವನ್ನು ಕೈಗೊಂಡರು. ಜೆಡಿಎಸ್ ಅಧ್ಯಕ್ಷ ಮೆರಾಜುದ್ದೀನ್ ಪಟೇಲ್, ವೈ.ಎಸ್.ವಿ.ದತ್ತ, ಎನ್.ಚೆಲುವರಾಯಸ್ವಾಮಿ ಮತ್ತು ಬಿಜೆಪಿ ಮುಖಂಡ ವೆಂಕಯ್ಯ ನಾಯ್ದು ನಡುವಿನ ಶನಿವಾರದ ಚರ್ಚೆ, ಈ ಬೆಳವಣಿಗೆಗೆ ಕಾರಣವಾಗಿದೆ.
ಚರ್ಚೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಒಡೆದು ಆಳುವ ನೀತಿ ಅನುಸರಿಸಿದ ಕಾಂಗ್ರೆಸ್ ಗೆ ಬುದ್ಧಿ ಕಲಿಸಲು ನಾವು ಮುಂದಾಗಿದ್ದೇವೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯನ್ನು ಜನರು ಒಪ್ಪಿದ್ದಾರೆ. ಹೀಗಾಗಿಯೇ ಮತ್ತೆ ಒಂದಾಗಿದ್ದೇವೆ. ಈ ಸರ್ಕಾರ ಪೂರ್ಣಾವಧಿ ಪೂರೈಸಲಿದೆ ಎಂದರು.
ಈ ಮೈತ್ರಿಗೆ ದೇವೇಗೌಡರ ಆಶೀರ್ವಾದ ಇದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಕಾದು ನೋಡೋಣ ಎಂದು ಕುಮಾರಸ್ವಾಮಿ ವಿಚಾರವನ್ನು ತೇಲಿಸಿದರು.
(ದಟ್ಸ್ ಕನ್ನಡ ವಾರ್ತೆ)