ಭಾರತೀಯ ರೈಲು ಕುಂಟುವುದಿಲ್ಲ,ಇನ್ಮುಂದೆ ಓಡುತ್ತವೆ!
ನವದೆಹಲಿ, ಅ. 26 : ಚುಕುಬುಕು ಕಾಲ ಮುಗಿಯಿತು. ಇನ್ನು ನಿಧಾನಿಸಿದರೆ ಪ್ರಯೋಜನವಿಲ್ಲ ಎಂದು ಭಾವಿಸಿದಂತಿದೆ ಭಾರತೀಯ ರೈಲ್ವೆ ಇಲಾಖೆ. ಅಂತೆಯೇ, ದೇಶದ ನಾನಾ ದಿಕ್ಕುಗಳಲ್ಲಿ ಚಲಿಸುವ ಪ್ರಮುಖ ರೈಲುಗಾಡಿಗಳ ವೇಗವನ್ನು ನಾಗಾಲೋಟಗೊಳಿಸುವುದಕ್ಕೆ ಸಿದ್ಧತೆ ಮಾಡುತ್ತಿದೆ.
ಈ ಪ್ರಕ್ರಿಯೆ ಆರಂಭವಾದದ್ದು ದೆಹಲಿ ಮತ್ತು ಕಾನ್ಪುರ ನಡುವೆ ಓಡುವ ಶತಾಬ್ದಿ ರೈಲಿನಿಂದ. ಈಗ ದೆಹಲಿ ಮತ್ತು ಆಗ್ರಾ ನಡುವೆ ಚಲಿಸುವ ಭೂಪಾಲ್ ಶತಾಬ್ದಿ ಎಕ್ಸ್ ಪ್ರೆಸ್ ಗಾಡಿಯ ವೇಗವನ್ನು ಗಂಟೆಗೆ 150 ಕಿ.ಮಿ.ಗೆ ಹೆಚ್ಚಿಸಲಾಗಿದೆ. ಕೇವಲ ವೇಗ ಹೆಚ್ಚಿಸುವುದಲ್ಲ, ರೈಲು ದಾರಿಗುಂಟ ಹಳಿ ಭದ್ರತೆ, ಸಿಗ್ನಲ್ ಸಾಮರ್ಥ್ಯ, ಮತ್ತು ಸುರಕ್ಷ ಕ್ರಮಗಳನ್ನು ಕೈಗೆತ್ತಿಕೊಳ್ಳಲು ರೈಲ್ವೇ ಇಲಾಖೆ ಹಲವಾರು ಕ್ರಮ ಕೈಗೊಂಡಿದೆ ಎಂದು ಭಾರತೀಯ ರೈಲು ಮಂತ್ರಾಲಯದ ಅಧಿಕಾರಿಗಳು ಹೇಳಿದ್ದಾರೆ.
ದೆಹಲಿ ಆಗ್ರಾ ನಡುವೆ ಸೂಕ್ಷ್ಮ ಪ್ರದೇಶಗಳಲ್ಲಿ ರೈಲು ವೇಗ ಸಾಧಿಸುವುದಕ್ಕಾಗಿ ಹಳಿಯ ಇಕ್ಕೆಲಗಳಲ್ಲಿ ಗೋಡೆಯನ್ನು ನಿರ್ಮಿಸಲಾಗಿದೆ. ಹಂತ ಹಂತವಾಗಿ ಶತಾಬ್ದಿಯಲ್ಲದೆ ಇತರ ರೈಲು ಮಾರ್ಗಗಳಲ್ಲಿಯೂ ರೈಲಿನ ವೇಗವನ್ನು ವೃದ್ಧಿಸಲಾಗುವುದು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರೋ ನಗರಗಳನ್ನು ಜೋಡಿಸುವ ರೈಲು ಮಾರ್ಗಗಳಲ್ಲಿ ಬುಲೆಟ್ ರೈಲುಗಳನ್ನು (250 ಕಿ.ಮಿ) ಹಾಕಲು ಇಲಾಖೆ ಈ ಮುಂಚೆ ಆಲೋಚನೆ ಮಾಡಿತ್ತು. ಆದರೆ, ಈ ಯೋಜನೆಗೆ ಇಲಾಖೆಯು ಸದ್ಯಕ್ಕೆ ಆದ್ಯತೆ ಕೊಡುತ್ತಿಲ್ಲ. ಯಾಕೆಂದರೆ ಬುಲೆಟ್ ಟ್ರೈನ್ ಪ್ರಾಜೆಕ್ಟ್ ಸಾಕಾರವಾಗುವುದಕ್ಕೆ 40.000 ಕೋಟಿ ರೂಪಾಯಿ ಬೇಕು. ಅಷ್ಟೊಂದು ರೊಕ್ಕ ಎಲ್ಲಿಂದ ತರೋದಕ್ಕಾಗತ್ತೆ?
(ದಟ್ಸ್ ಕನ್ನಡ ವಾರ್ತೆ)