ಶೀಲಹರಣದ ನೋವು ತೀರುವ ಮುನ್ನವೇ ಬಾಲೆಗೆ ತಾಯ್ತನ!
ಬೆಂಗಳೂರು, ಅ.24 : ಯಾವುದೂ ಗೊತ್ತಿಲ್ಲ.. ಗೊತ್ತಾಗುವ ಮೊದಲೇ ಶೀಲಹರಣ, ಇನ್ನಷ್ಟು ಗೊತ್ತಾಗುವ ಮುನ್ನವೇ ತಾಯ್ತನ! ಕಾಮುಕನೊಬ್ಬನ ದೆಸೆಯಿಂದ, ಶಾಲೆಗೆ ಹೋಗಬೇಕಿದ್ದ ಬಾಲಕಿ ಬಾಣಂತನ ಅನುಭವಿಸುತ್ತಿರುವ ದುರಂತ ಕತೆ ಇಲ್ಲಿದೆ.
ನಗರದ ಹಲಸೂರಿನಲ್ಲಿ 8ನೇ ತರಗತಿ ಓದುತ್ತಿದ್ದ ಬಾಲಕಿ ಹತ್ತು ತಿಂಗಳ ಹಿಂದೆ, ಮುನಿಯಪ್ಪ(45)ಎಂಬಾತನಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು. ಮುಜುಗರ ಮತ್ತು ಭಯದಿಂದ ಈ ವಿಚಾರವನ್ನು ಆಕೆ ಮುಚ್ಚಿಟ್ಟಿದ್ದಳು. ಆದರೆ ಈಗ ಮುಚ್ಚಿಡಲು ಏನೂ ಉಳಿದಿಲ್ಲ. ಬೌರಿಂಗ್ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡು ಮಲಗಿರುವ ಬಾಲಕಿಯ ಮುಂದೆ ಗೊಂದಲ... ನೋವು...
ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಮುನಿಯಪ್ಪ, ವೃತ್ತಿಯಲ್ಲಿ ಕಾರು ಚಾಲಕ. ಆತನಿಗೆ ಮದುವೆ ಸಹಾ ಆಗಿದೆ. ತಮ್ಮ ಮನೆ ಸಮೀಪದಲ್ಲಿಯೇ ಇದ್ದ ಬಾಲಕಿಯನ್ನು ಆತ ಆಗಾಗ ಸಲುಗೆಯಿಂದ ಮಾತನಾಡಿಸುತ್ತಿದ್ದ. ಬಾಲಕಿಗೆ ತಿಂಡಿ ತಂದುಕೊಡುತ್ತಿದ್ದ. ಬಾಲಕಿಗಾಗಲಿ, ಆಕೆ ಮನೆಯವರಿಗಾಗಲಿ ಮುನಿಯಪ್ಪನ ಒಳಮನಸ್ಸು ಗೊತ್ತಾಗಿರಲಿಲ್ಲ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಂದು ದಿನ ಮುನಿಯಪ್ಪ ಅತ್ಯಾಚಾರವೆಸಗಿದ. ವಿಷಯವನ್ನು ಯಾರಿಗಾದರೂ ಹೇಳಿದರೆ, ಕೊಲ್ಲುವುದಾಗಿ ಬೆದರಿಕೆಯೊಡ್ಡಿದ. ಈ ಮಧ್ಯೆ ಆಗಾಗ ತನ್ನ ಕಾಮದಾಟ ಮುಂದುವರೆಸಿದ.
ತಿಂಗಳುಗಳು ಉರುಳಿದವು. ಬಾಲಕಿ ಗರ್ಭಿಣಿಯಾದಳು. ಐದನೇ ತಿಂಗಳ ವೇಳೆಗೆ, ಸತ್ಯ ಮನೆಯವರಿಗೆ ಗೊತ್ತಾಯಿತು. ಆದರೆ ಗರ್ಭಪಾತ ಮಾಡಿಸುವ ದಿನಗಳು ಮುಗಿದುಹೋಗಿದ್ದವು. ಹೀಗಾಗಿ ಬಾಲಕಿ, ಮದುವೆಗೆ ಮುನ್ನವೇ ತಾಯಿಯಾಗಬೇಕಾಯಿತು. ಯಾರದೋ ಚಪಲಕ್ಕೆ,ಈಕೆ ಬಲಿಯಾದಳು. ಆಮೇಲೆ ಬಾಲಕಿ ಪೋಷಕರು ಹಲಸೂರು ಠಾಣೆಗೆ ದೂರು ನೀಡಿದ್ದು, ಮುನಿಯಪ್ಪನ ಬಂಧಿಸಿದ್ದು ಎಲ್ಲವೂ ಆಯಿತು. ಮುನಿಯಪ್ಪ ಈಗ ಜೈಲಲ್ಲಿದ್ದಾನೆ.
(ದಟ್ಸ್ ಕನ್ನಡ ವಾರ್ತೆ)