ಮತ್ತೆ ಮದುವೆ : ಜೆಡಿಎಸ್ ಗೆ ಆಹ್ವಾನ ನೀಡಿದ ಬಿಜೆಪಿ
ಯಾವುದೇ ಷರತ್ತುಗಳಿಲ್ಲದೇ ಜೆಡಿಎಸ್ ಬೆಂಬಲ ನೀಡಿದರೆ, ಹೊಸ ಸರ್ಕಾರ ರಚನೆ ಪ್ರಕ್ರಿಯೆ ಬಗ್ಗೆ ನಮ್ಮ ಪಕ್ಷ ಚಿಂತನೆ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಚುನಾವಣೆ ನಮ್ಮ ಮೊದಲ ಆದ್ಯತೆ. ಚುನಾವಣೆಗೆ ಪಕ್ಷ ಸಜ್ಜಾಗುತ್ತಿದೆ. ಮರು ಮೈತ್ರಿ ನಂತರದ ಆಯ್ಕೆ ಎಂದರು. ಈ ಮಧ್ಯೆ ಬಿಜೆಪಿಯ ಇನ್ನೊಬ್ಬ ಮುಖಂಡ ಬಿ.ಎಸ್.ಯಡಿಯೂರಪ್ಪ ಮಂಗಳವಾರ(ಅ.23)ತುಮಕೂರಿಗೆ ಭೇಟಿ ನೀಡಿದ್ದು, ಅಲ್ಲಿ ಸಿದ್ದಗಂಗಾ ಶ್ರೀಗಳ ಬಳಿ ಗುಪ್ತ ಸಮಾಲೋಚನೆ ನಡೆಸಿದ್ದಾರೆ.
ಮರು ಮೈತ್ರಿಯೇ ಅಥವಾ ಚುನಾವಣೆಯೇ ಎಂಬ ನಿಲುವು ಜೆಡಿಎಸ್ ನಲ್ಲಿ ಸ್ಪಷ್ಟವಾಗಿಲ್ಲ. ಅ.24ರಂದು ಜೆಡಿಎಸ್ ಸಭೆ ನಡೆಯಲಿದ್ದು, ಅಂತಿಮ ನಿಲುವು ಪ್ರಕಟಗೊಳ್ಳುವ ಸಾಧ್ಯತೆಗಳಿವೆ.
***
ಬಿಎಸ್ಎನ್ಎಲ್ ಬ್ರಾಂಡ್ ಬ್ಯಾಂಡ್ ಸೇವೆಯಲ್ಲಿ ವ್ಯತ್ಯಯ
ಬೆಂಗಳೂರು,ಬೀದರ್,ಬಿಜಾಪುರ, ಚಿಕ್ಕಮಗಳೂರು, ದಾವಣಗೆರೆ, ಮೈಸೂರು, ರಾಯಚೂರು, ತುಮಕೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಬಿಎಸ್ಎನ್ಎಲ್ ಬ್ರಾಂಡ್ ಬ್ಯಾಂಡ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಅ.24ರ ಬೆಳಗ್ಗೆ 5ರವರೆಗೆ ಈ ಸಮಸ್ಯೆಯಿರುವ ಸಾಧ್ಯತೆಯಿದೆ. ಈ ಜಿಲ್ಲೆಗಳಲ್ಲಿ ಸೇವಾ ವಿಸ್ತರಣಾ ಕಾರ್ಯ ಕೈಗೊಳ್ಳಲಾಗಿದೆ. ಹೀಗಾಗಿ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಬಿಎಸ್ಎನ್ಎಲ್ ಪ್ರಕಟಣೆ ತಿಳಿಸಿದೆ.
***
ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂಗೆ ಚಾರ್ಲ್ಸ್ ಪ್ರಶಸ್ತಿ
ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಮಾಜಿ ರಾಷ್ಟ್ರಪತಿ ಹಾಗೂ ದೇಶದ ಅಗ್ರಗಣ್ಯ ವಿಜ್ಞಾನಿ ಅಬ್ದುಲ್ ಕಲಾಂ ಅವರಿಗೆ ಪ್ರತಿಷ್ಠಿತ ಎರಡನೇ ಕಿಂಗ್ ಚಾರ್ಲ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಯಲ್ ಸೊಸೈಟಿಯಲ್ಲಿ ಭಾನುವಾರ(ಅ.22) ನಡೆದ ಸಮಾರಂಭದಲ್ಲಿ ಸೊಸೈಟಿಯಲ್ಲಿ ಅಧ್ಯಕ್ಷ ಮಾರ್ಟಿನ್ ರೀಸ್, ಕಲಾಂ ಅವರಿಗೆ ಈ ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ನೀಡಿ ಗೌರವಿಸಿದರು.
(ದಟ್ಸ್ ಕನ್ನಡ ಸುದ್ದಿಮನೆ )