ಜೆಡಿಎಸ್ ಶಾಸಕರ ರೆಸಾರ್ಟ್ ರಾಜಕಾರಣ (ಭಾಗ2)
ಬೆಂಗಳೂರು, ಅ.15 : ರೆಸಾರ್ಟ್ ರಾಜಕಾರಣ ಮತ್ತೊಮ್ಮೆ ರಾಜ್ಯದಲ್ಲಿ ಆರಂಭಗೊಂಡಿದೆ. ಪಕ್ಷದೊಳಗಿನ ಭಿನ್ನಮತ ಸರಿಪಡಿಸಲು ಮತ್ತು ಮುಂದಿನ ಕಾರ್ಯತಂತ್ರ ರೂಪಿಸಲು ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ. ಜೆಡಿಎಸ್ ಶಾಸಕರ ಸಭೆ ಸೋಮವಾರ(ಅ.15)ಮತ್ತು ಮಂಗಳವಾರ(ಅ.16) ನಗರದ ಹೊರವಲಯದ ನೆಲಮಂಗಲ ಸಮೀಪದ ರೆಸಾರ್ಟ್ ಒಂದರಲ್ಲಿ ನಡೆಯಲಿದೆ.
ಜೆಡಿಎಸ್ ಪಕ್ಷದ ಅನೇಕ ಶಾಸಕರು ಮರುಮೈತ್ರಿಯತ್ತ ಒಲವು ತೋರಿದ್ದಾರೆ. ನಾಯಕರಿಗೆ ಚುನಾವಣೆಗೆ ಹೋಗುವ ತವಕ. ಶಾಸಕರ ಮನವೊಲಿಸಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಭೆ ನಡೆಸುತ್ತಿದ್ದಾರೆ. ಹಿಂದೆ ಸರ್ಕಾರ ಕೆಡವಿ ಹೊಸ ಸರ್ಕಾರ ರಚಿಸಲು ರೆಸಾರ್ಟ್ ಯಾತ್ರೆಯನ್ನು ಕುಮಾರಸ್ವಾಮಿ ನಡೆಸಿದ್ದರು. ಈ ಸಲ ಪಕ್ಷ ಉಳಿಸಿಕೊಳ್ಳಲು ರೆಸಾರ್ಟ್ ಯಾತ್ರೆಗೆ ಮುಂದಾಗಿದ್ದಾರೆ.
ಕಾಂಗ್ರೆಸ್ ಜೊತೆ ಯಾವುದೇ ಕಾರಣಕ್ಕೂ ಸಂಧಾನ ಸಾಧ್ಯವಿಲ್ಲ ಎಂದಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ತಾಕತ್ತಿದ್ದರೆ ಕಾಂಗ್ರೆಸ್ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದ್ದಾರೆ. ಎಂ.ಪಿ.ಪ್ರಕಾಶ್, ಹೆಚ್.ಡಿ.ರೇವಣ್ಣ, ಡಿ.ಮಂಜುನಾಥ್, ಮೆರಾಜುದ್ದೀನ್ ಪಟೇಲ್ ಮತ್ತಿತರರನ್ನು ಹೊರಗಿಟ್ಟು ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಕೊನೆ ಕ್ಷಣದಲ್ಲಿ ಈ ಮುಖಂಡರಿಗೆ ಆಹ್ವಾನ ಹೋಗಿದೆ .
(ದಟ್ಸ್ ಕನ್ನಡ ವಾರ್ತೆ)