ಪಕ್ಕದ್ಮನೆಗೋಗಿ ಗೊಂಬೆ ನೋಡ್ಕಂಡು ಬರೋಣ ಬಾರೋ..
ಮೈಸೂರು, ಅ.13 : ದಸರಾ ಸಂದರ್ಭದಲ್ಲಿನ ಗೊಂಬೆ ಹಬ್ಬ ಎಲ್ಲರಿಗೂ ಇಷ್ಟ. ಮಕ್ಕಳಿಗಂತೂ ಖುಷಿಯೋ ಖುಷಿ. ಒಡೆಯರ್ ಕಾಲದಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ. ಮಹಿಳೆಯರ ಕುಶಲ ಕಲೆಯನ್ನು ಬಿಂಬಿಸಲು ಇದು ಪೂರಕ ಸಂದರ್ಭ. ಅರಮನೆ ನಗರಿ ಮೈಸೂರಿನ ಮನೆಮನೆಗಳಲ್ಲಿ ಶುಕ್ರವಾರ(ಅ.12)ದಿಂದ ಗೊಂಬೆ ಹಬ್ಬ ಆರಂಭಗೊಂಡಿದೆ.
ನವರಾತ್ರಿಯ ಒಂದು ಭಾಗ ಗೊಂಬೆಹಬ್ಬ. 16ನೇ ಶತಮಾನದಲ್ಲಿ ಒಡೆಯರ್ ಮನೆತನದವರು ಗೌರಿಯನ್ನು ಇಟ್ಟು ಪೂಜಿಸುತ್ತಿದ್ದರು. 9ದಿನ ಗೌರಿ ಗೊಂಬೆಗೆ ನಾನಾ ಅಲಂಕಾರ ಮಾಡುತ್ತಿದ್ದರು. ನಂತರ 18ನೇ ಶತಮಾನದಲ್ಲಿ ಗೌರಿ ಜಾಗದಲ್ಲಿ ಗೊಂಬೆಗಳು ಬಂದವು. ಅರಮನೆಯಲ್ಲಿ ಗೊಂಬೆಗಳ ಕೂರಿಸುವ ಪರಿಪಾಠ ಇಂದಿಗೂ ಇದೆ. ಅವುಗಳ ಸಂಗ್ರಹಕ್ಕಾಗಿ ಗೊಂಬೆ ತೊಟ್ಟಿ ಸಹಾ ಇದೆ. ಗೊಂಬೆಗಳಿಗೆ ರಾಜ ಮರ್ಯಾದೆ ಸಹಾ ಇದೆ.
ಅಂದ ಹಾಗೇ, ಗೊಂಬೆ ಜೋಡಿಸಲು ಒಂದು ನಿರ್ದಿಷ್ಟ ಪದ್ಧತಿ ಇದೆ. ಪಟ್ಟದ ಬೊಂಬೆಯನ್ನು ಮಧ್ಯದಲ್ಲಿದ್ದು, ವಿವಿಧ ಅಲಂಕಾರ ಮಾಡಲಾಗುತ್ತದೆ. ಸಾಮಾನ್ಯವಾಗಿ ಶ್ರೀಗಂಧದ ಮರದಲ್ಲಿ ಪಟ್ಟದ ಗೊಂಬೆ ಮಾಡಿರುತ್ತಾರೆ. ಆಧುನಿಕ ಜಗತ್ತಿನಲ್ಲಿ ಮರದ ಗೊಂಬೆಗಳ ಜೊತೆಗೆ ಪ್ಲಾಸ್ಟಿಕ್ ಗೊಂಬೆಗಳೂ ಸಹಾ ಸೇರಿಕೊಂಡಿವೆ. ಮಕ್ಕಳು ತಮ್ಮ ಗೆಳೆಯರನ್ನು ಮನೆಗೆ ಆಹ್ವಾನಿಸುವುದು, ಗೊಂಬೆಗಳ ನೋಡಲು ಮನೆಮನೆಗೆ ತೆರಳುವುದು ಸಾಮಾನ್ಯ ವಾಡಿಕೆ. ಗೊಂಬೆ ನೆಪದಲ್ಲಿ ಸಂಬಂಧಗಳ ಚಿಗುರಿಸಲು ಮತ್ತು ಸೌಹಾರ್ದತೆಯನ್ನು ಸಾರಲು ಈ ಹಬ್ಬ ಒಂದು ಸಾಧನ.
(ದಟ್ಸ್ ಕನ್ನಡ ವಾರ್ತೆ)