ದಸರಾ ಶುಭಾರಂಭ: ಅರಮನೆ ನಗರ ಮೈಸೂರು ಗಿಜಿಗಿಜಿ
ಮೈಸೂರು, ಅ.12 : ವಿಶ್ವವಿಖ್ಯಾತ 10ದಿನಗಳ ದಸರಾ ಉತ್ಸವ ಶುಕ್ರವಾರ(ಅ.12)ಆರಂಭಗೊಂಡಿದೆ. ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಮುಖಾಂತರ ದಸರಾಗೆ ಸಾಂಪ್ರದಾಯಿಕ ಚಾಲನೆ ಸಿಕ್ಕಿದೆ. ವಿದ್ಯುತ್ ದೀಪಾಲಂಕಾರದಿಂದ ಅರಮನೆ ನಗರ ಮಿಂಚುತ್ತಿದೆ. ಪ್ರವಾಸಿಕರಿಂದ ಮೈಸೂರು ತುಂಬಿ ತುಳುಕುತ್ತಿದೆ.
ಈ ಸಲ ದಸರಾ ಉದ್ಘಾಟನೆಯ ಹೊಣೆಯನ್ನು ಸರ್ಕಾರ ಸಿದ್ಧಗಂಗಾ ಶ್ರೀಗಳಿಗೆ ಒಪ್ಪಿಸಿತ್ತು. ಅನಾರೋಗ್ಯದ ಕಾರಣ, ಅವರು ಕೊನೆ ಕ್ಷಣದಲ್ಲಿ ಆಹ್ವಾನವನ್ನು ತಿರಸ್ಕರಿಸಿದರು. ಹೀಗಾಗಿ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿ, ಉತ್ಸವಕ್ಕೆ ಚಾಲನೆ ನೀಡಿದರು. ನಂತರ ದೇವಸ್ಥಾನದ ಹೊರಗಡೆ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ದಸರಾ ಆಚರಣೆ ನಮ್ಮಲ್ಲಿನ ಭಾವೈಕ್ಯತೆಯನ್ನು ಎತ್ತಿ ಹಿಡಿಯುವ ಸಂಕೇತ. ಸ್ನೇಹ, ಶಾಂತಿ ಮತ್ತು ಸಾಮರಸ್ಯದಿಂದ ಬಾಳಬೇಕು ಎಂಬುದೇ ದಸರಾ ಆಚರಣೆಯ ಉದ್ದೇಶ ಎಂದು ಶ್ರೀಗಳು ಹೇಳಿದರು.ವಿಜಯ ನಗರ ಕಾಲದಲ್ಲಿನ ದಸರಾ ಆಚರಣೆಯನ್ನು ಈ ಸಂದರ್ಭದಲ್ಲಿ ಮೆಲುಕು ಹಾಕಿದರು.
ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ನಿಧನದ ಹಿನ್ನೆಲೆಯಲ್ಲಿನ ಶೋಕಾಚರಣೆ ಮತ್ತು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತದ ಕರಿಮೋಡದ ಮಧ್ಯೆಯೇ ದಸರಾ ಆರಂಭಗೊಂಡಿದೆ. ದಸರಾ ಚಲನಚಿತ್ರೋತ್ಸವ, ಕುಸ್ತಿ ಪಂದ್ಯಾವಳಿ, ವಸ್ತು ಪ್ರದರ್ಶನ, ಸಾಂಸ್ಕತಿಕ ಕಾರ್ಯಕ್ರಮಗಳ ಉದ್ಘಾಟನೆ ಶನಿವಾರ ನಡೆಯಲಿದೆ. ಚಲನಚಿತ್ರೋತ್ಸವವನ್ನು ಎಂ.ಪಿ.ಶಂಕರ್ ಉದ್ಘಾಟಿಸುವರು.
ಕಳೆದ 20ವರ್ಷಗಳಲ್ಲಿ ದಸರಾ ಮೇಲೆ ಎರಡು ಸಲ ರಾಷ್ಟ್ಪಪತಿ ಆಡಳಿತದ ಕರಿನೆರಳು ಬಿದ್ದಿದೆ. 1989ರಲ್ಲಿ ದಸರಾ ಹಿನ್ನೆಲೆಯಲ್ಲಿನ ಜಂಬೂಸವಾರಿಗೆ ಆಗಿನ ರಾಜ್ಯಪಾಲ ವೆಂಕಟಸುಬ್ಬಯ್ಯ ಚಾಲನೆ ನೀಡಿದ್ದರು. ಈ ಸಲದ ಜಂಬೂಸವಾರಿಗೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಚಾಲನೆ ನೀಡುವ ಸಾಧ್ಯತೆಗಳಿವೆ.
ಮೈಸೂರು ಮಾತ್ರವಲ್ಲದೇ ರಾಜ್ಯದ ವಿವಿಧೆಡೆ ದಸರಾ ಮತ್ತು ನವರಾತ್ರಿಯ ಸಂಭ್ರಮ ಕಂಡು ಬಂದಿದೆ. ಶೃಂಗೇರಿಯಲ್ಲಿ ಶರನ್ನವರಾತ್ರಿ ಆರಂಭಗೊಂಡಿದ್ದು, ಶಾರದಾಂಬೆಗೆ ಮುಂದಿನ 9ದಿನಗಳೂ ವಿಶೇಷ ಪೂಜೆ ನಡೆಯಲಿದೆ. ಹುಬ್ಬಳ್ಳಿಯಲ್ಲಿ ಬಾಳೆ ಹೊನ್ನೂರಿನ ರಂಭಾಪುರಿ ಶ್ರೀಗಳು ಇಂದು 16ನೇ ದಸರಾ ದರ್ಬಾರ್ ನಡೆಸಿದ್ದಾರೆ.
ಮಡಿಕೇರಿಯಲ್ಲಿ ಜನೋತ್ಸವ, ಕೊಪ್ಪಳ ಜಿಲ್ಲೆಯ ಹೇಮಗುಡ್ಡದಲ್ಲಿ ದಸರಾ ನಡೆಯುತ್ತಿದೆ.
(ದಟ್ಸ್ ಕನ್ನಡ ವಾರ್ತೆ)