ರೆಡ್ಡಿ ಅಮಾನತು ರದ್ದು : ಮೈತ್ರಿ ಪ್ರಯತ್ನಕ್ಕೆ ಕೊನೆ ಮೊಳೆ
ಬೆಂಗಳೂರು, ಅ.12 : ಮುಖ್ಯಮಂತ್ರಿಗಳ ವಿರುದ್ಧ 150ಕೋಟಿ ರೂ. ಲಂಚ ಆರೋಪ ಮಾಡಿದ್ದ ವಿಧಾನ ಪರಿಷತ್ ಸದಸ್ಯ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿಗೆ ಮರಳಿದ್ದಾರೆ. ಅವರ ಅಮಾನತನ್ನು ಬಿಜೆಪಿ ಅಧಿಕೃತವಾಗಿ ಶುಕ್ರವಾರ(ಅ.12)ವಾಪಸ್ ಪಡೆಯಲಿದೆ.
ಈ ಬೆಳವಣಿಗೆಯಿಂದಾಗಿ ಜೆಡಿಎಸ್ ಮತ್ತು ಬಿಜೆಪಿ ಮರು ಮೈತ್ರಿಯ ಕನಸಿಗೆ ತೆರೆ ಎಳೆದಂತಾಗಿದೆ. ರಾಜ್ಯ ಬಿಜೆಪಿ ನಾಯಕರ ಮನವಿಗೆ ಸ್ಪಂದಿಸಿದ ಪಕ್ಷದ ಹೈಕಮಾಂಡ್, ರೆಡ್ಡಿ ಅಮಾನತು ಹಿಂಪಡೆಯಲು ಸಮ್ಮತಿಸಿದೆ. ಆ ಮುಖಾಂತರ ಜೆಡಿಎಸ್ ಜೊತೆ ಮರು ಮೈತ್ರಿ ಅಸಾಧ್ಯ ಎಂಬ ಸಂದೇಶ ರವಾನಿಸಿದೆ.
ಪಕ್ಷದಲ್ಲಿದ್ದಾಗಲೇ ದೇವೇಗೌಡ ಮತ್ತು ಕುಮಾರಸ್ವಾಮಿ ವಿರುದ್ಧ ಸಮರ ರೆಡ್ಡಿ ಸಮರ ಸಾರಿದ್ದರು. ಬಳ್ಳಾರಿ ಗಣಿ ಹಗರಣ, ರಾಜ್ಯದೆಲ್ಲೆಡೆ ತೀವ್ರ ಚರ್ಚೆಗೆ ಕಾರಣವಾಗಿತ್ತು. ಸತ್ಯಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಭ್ರಷ್ಟಾಚಾರದ ವಿರುದ್ಧ ತಮ್ಮ ಸಮರ ಮುಂದುವರೆಸುವುದಾಗಿ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಬಳ್ಳಾರಿ ಬಿಜೆಪಿ ಘಟಕ ಜೆಡಿಎಸ್ ವಿರುದ್ಧ ಮೊದಲಿನಿಂದಲೂ ಗುರ್ ಎನ್ನುತ್ತಿದೆ. ಬಿಜೆಪಿಯ ಕಮಲ ಬಳ್ಳಾರಿಯಲ್ಲಿ ಅರಳಲು ರೆಡ್ಡಿ ಸಹೋದರರೇ ಕಾರಣ. ನನ್ನ ಕೊಲೆಗೆ ಕುಮಾರಸ್ವಾಮಿ ಪ್ರಯತ್ನಿಸಿದ್ದಾರೆ ಎಂದು ಆಪಾದನೆ ಮಾಡಿದ್ದ ಮಾಜಿ ಸಚಿವ ಶ್ರೀರಾಮುಲು, ರೆಡ್ಡಿ ಕುಟುಂಬಕ್ಕೆ ಆಪ್ತರು.
ಅಧಿಕಾರ ಹಸ್ತಾಂತರ ಮಾಡದಿರಲು ರೆಡ್ಡಿ ಮತ್ತು ಶ್ರೀರಾಮುಲು ಪ್ರಕರಣಗಳು ಸಹಾ ಪ್ರಮುಖ ಕಾರಣಗಳೇ ಆಗಿವೆ ಎಂದು ಹೆಚ್.ಡಿ.ಕುಮಾರಸ್ವಾಮಿ ಈ ಹಿಂದೆ ಹೇಳಿದ್ದರು.
(ದಟ್ಸ್ ಕನ್ನಡ ವಾರ್ತೆ)