ಮಾನಸಿಕ ಅಸ್ವಸ್ಥೆಯಿಂದ ಪೊಲೀಸ್ ಕಾನ್ಸ್ಟೇಬಲ್ ಹತ್ಯೆ
ಬೆಂಗಳೂರು, ಅ.10 : ಮಾನಸಿಕ ಅಸ್ವಸ್ಥೆಯಿಂದ ಹತ್ಯೆಗೀಡಾದ ಪೊಲೀಸ್ ಕಾನ್ಸ್ಟೇಬಲ್ ಮಾದಯ್ಯ ಅವರ ಪತ್ನಿ ಮತ್ತು ಕುಟುಂಬದವರು ಸಂಪಂಗಿರಾಮನಗರ ಪೊಲೀಸ್ ಠಾಣೆ ಎದಿರು ಬುಧವಾರ ಬೆಳಿಗ್ಗೆಯಿಂದ ಧರಣಿ ಕುಳಿತಿದ್ದಾರೆ.
ಪೊಲೀಸ್ ಪೇದೆಗಳಾದ ಮಾದಯ್ಯ(45) ಮತ್ತು ಪ್ರಕಾಶ್ ಎಂಬುವವರು ಮಂಗಳವಾರ ರಾತ್ರಿ ಗಸ್ತು ತಿರುಗುತ್ತಿದ್ದಾಗ ಇದ್ದಕ್ಕಿದ್ದಂತೆ ಓಡಿ ಬಂದ ಗೀತಾ ಎಂಬ ಮಹಿಳೆ ತನ್ನ ಕೈಗೆ ಯಾರೋ ಚಾಕುವಿನಿಂದ ಚುಚ್ಚಿದ್ದಾರೆ ಎಂದು ಅಲವತ್ತುಕೊಂಡಳು. ಅವಳನ್ನು ಆಸ್ಪತ್ರೆಗೆ ಸಾಗಿಸಬೇಕೆಂದುಕೊಂಡಾಗ ಗೀತಾ ಇದ್ದಕ್ಕಿದ್ದಂತೆ ಚಾಕು ತೆಗೆದು ಮಾದಯ್ಯ ಅವರ ಕುತ್ತಿಗೆಗೆ ಇರಿದಿದ್ದಾಳೆ.
ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮಾದಯ್ಯ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಅವರು ಅಸುನೀಗಿದ್ದಾರೆ.
ಗೀತಾ ಮಾನಸಿಕವಾಗಿ ಅಸ್ವಸ್ಥಳಾಗಿದ್ದು, ಸಹಾಯಕ ಪೊಲೀಸ್ ಆಯುಕ್ತ ರಮೇಶ್ ಬಾಬು ಅವರ ಸಹೋದರಿ.
ಹಿರಿಯ ಪೊಲೀಸ್ ಆಯುಕ್ತರ ತಂಗಿಯಾದ್ದರಿಂದ ಕೊಲೆ ಕೇಸನ್ನು ಮುಚ್ಚಿ ಹಾಕಲಾಗುತ್ತಿದೆ. ನಮಗೆ ನ್ಯಾಯ ಸಿಗಬೇಕು ಎಂದು ಮೃತ ಮಾದಯ್ಯ ಅವರ ಪತ್ನಿ ಮತ್ತು ಕುಟುಂಬದವರು ಠಾಣೆಯ ಎದಿರು ಧರಣಿ ನಡೆಸಿದ್ದರು.
ಮಾದಯ್ಯನ ಪತ್ನಿ ಮತ್ತು ಕುಟುಂಬದವರ ಹೋರಾಟಕ್ಕೆ ಮಣಿದು ಗೀತಾಳ ವಿರುದ್ಧ ಭಾರತೀಯ ದಂಡ ಸಂಹಿತೆಯ 302 ನಿಯಮದ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
(ದಟ್ಸ್ಕನ್ನಡ ವಾರ್ತೆ)