ರಾಷ್ಟ್ರಪತಿ ಆಡಳಿತ ಅಂದರೆ ಏನು? ಪರಿಣಾಮಗಳು ಏನು?
ಬೆಂಗಳೂರು, ಅ.09 : ಈ ಹಿಂದೆ ನಾಲ್ಕು ಸಲ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಗಿತ್ತು. ಈಗ 5ನೇ ಬಾರಿಗೆ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ.. ಇಷ್ಟಕ್ಕೂ ಏನಿದು ರಾಷ್ಟ್ರಪತಿ ಆಡಳಿತ? ಇದರ ಹಿನ್ನೆಲೆ ಮುನ್ನೆಲೆ ಬಗ್ಗೆ ಒಂದಿಷ್ಟು ಮಾಹಿತಿ.
ರಾಷ್ಟ್ರಪತಿ ಆಡಳಿತ ಎಂದರೇನು?
ಸಂವಿಧಾನದ 356ನೇ ವಿಧಿಯಲ್ಲಿ, ಸಂವಿಧಾನಿಕ ವ್ಯವಸ್ಥೆಯ ವೈಫಲ್ಯದ ಬಗ್ಗೆ ಚರ್ಚಿಸಲಾಗಿದೆ. ಸರಳವಾಗಿ ಹೇಳುವುದಾದರೆ, ಯಾವುದೇ ಒಂದು ರಾಜ್ಯದ ಸಂವಿಧಾನಿಕ ವ್ಯವಸ್ಥೆ ಕೆಲಸ ಮಾಡಲು ವಿಫಲವಾದರೆ, ಆಗ ರಾಜ್ಯವು ಕೇಂದ್ರ ಸರ್ಕಾರದ ನೇರ ನಿಯಂತ್ರಣಕ್ಕೆ ಬರುತ್ತದೆ. ಇಲ್ಲಿ ಆಡಳಿತ ನಿರ್ವಹಣೆಯ ಹೊಣೆ ರಾಜ್ಯಪಾಲರದು.
ಜಾರಿ ಹೇಗೆ?
ರಾಜ್ಯಪಾಲರ ಶಿಫಾರಸನ್ನು ಅನುಸರಿಸಿ ಕೇಂದ್ರ ಸಚಿವ ಸಂಪುಟ ತೀರ್ಮಾನ ಕೈಗೊಳ್ಳುತ್ತದೆ. ಇದು ಬಳಿಕ ರಾಷ್ಟ್ರಪತಿಗಳಿಂದ ಅಂಗೀಕಾರಕ್ಕೊಳಗಾಗುತ್ತದೆ.
ವಿಧಾನಸಭೆ ಗತಿ?
ರಾಷ್ಟ್ರಪತಿ ಆಡಳಿತ ಹೇರಿದಾಗ ವಿಧಾನಸಭೆ ರದ್ದಾಗಬಹುದು. ಅಥವಾ ಅಮಾನತ್ತಿನಲ್ಲಿಡಬಹುದು.
ಎಷ್ಟು ಅವಧಿಗೆ?
ಸಂವಿಧಾನ ತಿಳಿಸುವಂತೆ, ಆರು ತಿಂಗಳಿಗಿಂತಲೂ ಹೆಚ್ಚು ಕಾಲ ಜಾರಿಗೆ ತರಬಾರದು. ಆರು ತಿಂಗಳ ನಂತರ ಮತ್ತೆ ವಿಸ್ತರಿಸುವ ಸಂದರ್ಭ ಬಂದರೆ ಸಂಸತ್ತಿನ ಒಪ್ಪಿಗೆ ಅತ್ಯಗತ್ಯ.
ರಾಜ್ಯದಲ್ಲಿ
ಈ
ಮೊದಲು
:
- 1971ರಲ್ಲಿ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದಾಗ 3ತಿಂಗಳು.
- 1978ರಲ್ಲಿ ಡಿ.ದೇವರಾಜ ಅರಸ್ ಅವಧಿಯಲ್ಲಿ 3ತಿಂಗಳು.
- 1989ರಲ್ಲಿ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ 4ತಿಂಗಳು.
- 1990ರಲ್ಲಿ ಎಸ್.ಬಂಗಾರಪ್ಪ ಅವಧಿಯಲ್ಲಿ ವಿಧಾನಸಭೆ ಅಮಾನತು.
- 2007ರಲ್ಲಿ ಮತ್ತೊಮ್ಮೆ. ಅವಧಿ?
ಪರಿಣಾಮ?
ಜನಪ್ರತಿನಿಧಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ. ಎಲ್ಲಕ್ಕೂ ಅಧಿಕಾರಿಗಳತ್ತ ನೋಡಬೇಕಾಗುತ್ತದೆ. ಜನಪ್ರತಿನಿಧಿಗಳ ಭಯವಿಲ್ಲದ ಅಧಿಕಾರಿಗಳು, ಮನಬಂದಂತೆ ವರ್ತಿಸಬಹುದು. ಆಡಳಿತ ಯಂತ್ರದಲ್ಲಿ ಜಡತ್ವ. ಅಭಿವೃದ್ಧಿ ಕಾಮಗಾರಿ ಸ್ಥಗಿತ.
(ಪೂರಕ ಮಾಹಿತಿ : ವಿಕ)