ಪತಿ ಭಿಕ್ಷೆ ಕೇಳಿದರು ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ!
ಬೆಂಗಳೂರು, ಅ.09 : ಪದ್ಮನಾಭ ನಗರದ ದೇವೇಗೌಡರ ನಿವಾಸ ಸೋಮವಾರ(ಅ.08)ಒಂದು ರಾಜಕೀಯ ಪ್ರಹಸನಕ್ಕೆ ಸಾಕ್ಷಿಯಾಗಿತ್ತು. ಬಿಜೆಪಿ ಮರು ಸಖ್ಯದ ಬಗ್ಗೆ ಜೆಡಿಎಸ್ ಶಾಸಕರು ಮತ್ತು ದೇವೇಗೌಡರ ನಡುವೆ ಚರ್ಚೆಗೆ ಅಲ್ಲಿ ವೇದಿಕೆ ಸಿಕ್ಕಿತ್ತು ಎಂದು ಪಕ್ಷದ ನಾಯಕರು ಮಂಗಳವಾರ(ಅ.09) ಅಲ್ಲಲ್ಲಿ ಮಾತಾಡುತ್ತಿದ್ದಾರೆ.
ಮನವೊಲಿಕೆಗೆ ಸೋಲದ ದೇವೇಗೌಡರು, ಯಾವುದೇ ಕಾರಣಕ್ಕೂ ಬಿಜೆಪಿ ಸೇರಬೇಡಿ ಎಂದು ಜೆಡಿಎಸ್ ಶಾಸಕರಿಗೆ ಪದೇಪದೇ ಹೇಳತೊಡಗಿದರು. ಒಂದು ಹಂತದಲ್ಲಿ ಮಧ್ಯೆ ಪ್ರವೇಶಿಸಿದ ದೇವೇಗೌಡರ ಪತ್ನಿ ಚೆನ್ನಮ್ಮ, ದಯಮಾಡಿ ಬಿಜೆಪಿ ಸೇರಬೇಡಿ. ಅವರ ಇಷ್ಟಕ್ಕೆ ವಿರುದ್ಧ ನಡೆದು, ನೋವು ಕೊಡಬೇಡಿ. ನನ್ನ ಮಾಂಗಲ್ಯ ಉಳಿಸುವ ಶಕ್ತಿ ನಿಮ್ಮ ಕೈಲಿದೆ. ಒಂದು ವೇಳೆ ನೀವು ಬಿಜೆಪಿ ಸೇರಿದರೆ, ದೇವೇಗೌಡರು ಉಳಿಯುವುದಿಲ್ಲ. ನಾನು ಸೌಭಾಗ್ಯ ಕಳೆದುಕೊಳ್ಳುತ್ತೇನೆ ಎಂದು ಅಂಗಲಾಚತೊಡಗಿದ ಘಟನೆಯೂ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಿಜೆಪಿ ಸಖ್ಯವನ್ನು ಜೆಡಿಎಲ್ ಪಿ ಸಭೆಯಲ್ಲಿ ವಿರೋಧಿಸಿದ ಹೆಚ್.ಡಿ.ರೇವಣ್ಣ, ತಮ್ಮ ಸಹೋದರ ಕುಮಾರಸ್ವಾಮಿ ಮನವೊಲಿಸಲು ಪ್ರಯತ್ನಿಸಿದರು. ನೀನು ಬಿಜೆಪಿ ಹಿಂದೆ ಹೋದರೆ, ಅಪ್ಪ ನೇಣು ಹಾಕಿಕೊಂಡು ಸಾಯುತ್ತಾರೆ.. ಆ ಸಾವಿಗೆ ನೀನೇ ಕಾರಣ ಎಂದು ಬೆದರಿಕೆಯೊಡ್ಡಿದರು. ಈ ಘಟನೆಗೆ ಅನೇಕ ಜೆಡಿಎಸ್ ಶಾಸಕರೇ ಸಾಕ್ಷಿ ಎಂದು ಮಾಧ್ಯಮಗಳು ಹೇಳಿವೆ.
(ದಟ್ಸ್ ಕನ್ನಡ ವಾರ್ತೆ)