ಕನ್ನಡದ ಪರವಾಗಿ ಕೈ ಎತ್ತಿದ ಬಾಲಗಂಗಾಧರ ಸ್ವಾಮೀಜಿ
ಬೆಂಗಳೂರು, ಅ.9 : ಬೆಂಗಳೂರಿನ ಕೆಲವು ಪ್ರದೇಶ ಮತ್ತು ರಸ್ತೆಗಳ ಆಂಗ್ಲ ನಾಮಗಳನ್ನು ಬದಲಿಸಿ, ಮರುನಾಮಕರಣ ಮಾಡಬೇಕು. ದೇವನಹಳ್ಳಿ ಬಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳಿಗೆ ನಾಡಪ್ರಭು ಕೆಂಪೇಗೌಡರ ಹೆಸರಿಡಬೇಕೆಂದು ಬಾಲಗಂಗಾಧರ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಕಬ್ಬನ್ಪಾರ್ಕ್, ಸೇಂಟ್ಮಾರ್ಕ್ ರಸ್ತೆ, ಚರ್ಚ್ಸ್ಟ್ರೀಟ್ ಸೇರಿದಂತೆ ಇಂಗ್ಲಿಷ್ ಹೆಸರಿರುವ ರಸ್ತೆ ಹಾಗೂ ಪ್ರದೇಶಗಳಿಗೆ ಮರುನಾಮಕರಣ ಮಾಡಿ ಕನ್ನಡದ ಹೆಸರಿಡಬೇಕು. ಕೆಂಪೇಗೌಡ ಮತ್ತು ಕೆಂಗಲ್ ಹನುಮಂತಯ್ಯ ಅವರ ಹೆಸರಿನಲ್ಲಿ ಉದ್ಯಾನ ಸ್ಥಾಪಿಸಲು ಭೂಮಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಾಲಭೈರವ ಕಲಾನಿಕೇತನ ಪುರಭವನದಲ್ಲಿ ಹಮ್ಮಿಕೊಂಡಿದ್ದ ಕೆಂಪೇಗೌಡರ 497ನೇ ಮತ್ತು ಕೆಂಗಲ್ ಹನುಮಂತಯ್ಯ ಅವರ 101ನೇ ಜಯಂತ್ಯುತ್ಸವದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ರಂಗೋತ್ಸವ-2007ನ್ನೂ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ನ ಮಾಜಿ ಸದಸ್ಯ ಎಂ.ಕೃಷ್ಣಪ್ಪ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಶ್ರೀನಿವಾಸ್ ಜಿ. ಕಪ್ಪಣ್ಣ, ಮಾಜಿ ಸಚಿವ ಚಂದ್ರಶೇಖರ್, ಮಾಜಿ ಉಪ ಮೇಯರ್ ಎಂ. ಲಕ್ಷ್ಮೀನಾರಾಯಣ ಮತ್ತಿತರು ಉಪಸ್ಥಿತರಿದ್ದರು.
(ದಟ್ಸ್ಕನ್ನಡ ವಾರ್ತೆ)