ಬಾಬಾ ಮ್ಯಾಜಿಕ್ ಟುಸ್ ಪಟಾಕಿ! ಭಕ್ತಗಣಕ್ಕೆ ನಿರಾಸೆ!
ಪುಟ್ಟಪರ್ತಿ, ಅ.5 : ಪಾಪ ಬಾಬಾ ಮ್ಯಾಜಿಕ್ ಫಲಿಸಲಿಲ್ಲ! ಬರಿಗೈಲಿ ಬೂದಿ, ಉಂಗುರ ಎಲ್ಲಾ ಕೊಡ್ತೀನಿ ಅನ್ನುತ್ತಿದ್ದ ಬಾಬಾ, ದೊಡ್ಡ ಮ್ಯಾಜಿಕ್ ಮಾಡೋವಾಗ ದಾರಿ ತಪ್ಪಿದರು! ಪುಟ್ಟಪರ್ತಿಯ ಸಾಯಿಬಾಬಾ ತನ್ನ ಅಸಂಖ್ಯ ಭಕ್ತರ ಕಣ್ಣಿಗೆ ಮಣ್ಣೆರಚಿದ್ದಾರೆ! ಗುರುವಾರ (ಅ.4) ಸಂಜೆ 7ರಿಂದ 7.30ರ ಸಮಯದಲ್ಲಿ ವಿಶ್ವರೂಪ ದರ್ಶನ ನೀಡುತ್ತೇನೆಂದು ಹೇಳಿ ನಿರಾಸೆ ಮೂಡಿಸಿದ್ದಾರೆ.
'ಗುರುವಾರ ಅಂದರೆ ಅಕ್ಟೋಬರ್ 4, 2007ರಂದು ನಾನು ಚಂದ್ರನಲ್ಲಿ ಕಾಣಿಸಲಿದ್ದೇನೆ. ಆ ವಿಶ್ವರೂಪವನ್ನು ನೀವು ಸಂಜೆ 7ರಿಂದ 7.30ರ ಸಮಯದಲ್ಲಿ ಕಾಣಬಹುದು" ಎಂದು ಸಾಯಿಬಾಬಾ ಹೇಳಿದ್ದರು. ಈಗಾಗಲೇ ಅವರ ಅಪರೂಪ ದರ್ಶನವನ್ನು ಪಡೆದಿದ್ದ ಅವರ ಭಕ್ತರು, ವಿಶ್ವರೂಪ ದರ್ಶನಕ್ಕಾಗಿ ಪುಳಕಿತರಾಗಿದ್ದರು. ಆದರೆ ಬಾಬಾ ತನ್ನ ವಿಶ್ವರೂಪ ದರ್ಶನವನ್ನು ತೋರಿಸದೆ ತನ್ನ ಭಕ್ತರಿಗೆ ತಣ್ಣೀರೆರಚಿದ್ದಾರೆ.
ಈ ಸುದ್ದಿ ತಿಳಿದು ಬಾಬಾರ ಸಾವಿರಾರು ಭಕ್ತರು ಪುಟ್ಟಪರ್ತಿಯಲ್ಲಿ ಜಮಾಯಿಸಿದರು. ಗುರುವಾರ (ಅ.4)ಸಂಜೆ ಕೇವಲ ಎರಡು ಗಂಟೆಗಳಲ್ಲೇ ಜನಸಾಗರ ಆಕಾಶ ನೋಡುತ್ತಾ ನಿಂತು ಬಿಟ್ಟಿತು. ಸಾಲದಕ್ಕೆ ಮೂರು ಟಿವಿ ಚಾನಲ್ಗಳು ನೇರ ಪ್ರಸಾರ ಮಾಡುತ್ತೇವೆಂದು ಪ್ರಕಟಿಸಿಕೊಂಡವು. 100ಕ್ಕೂ ಅಧಿಕ ಮಾಧ್ಯಮ ಪ್ರತಿನಿಧಿಗಳು, ಹಲವಾರು ಟೀವಿ ಚಾನೆಲ್ಗಳು ವಿಶ್ವರೂಪ ದರ್ಶನಕ್ಕಾಗಿ ಕಾದು ಕುಳಿತಿದ್ದರು. ಪುಟ್ಟಪರ್ತಿಯ ಸಾಯಿ ವಿಮಾನ ನಿಲ್ದಾಣದಲ್ಲಿ ಜನ ಮರುಳೊ ಜಾತ್ರೆ ಮರುಳೊ ಅನ್ನುವಂತಿತ್ತು ಪರಿಸ್ಥಿತಿ.
ಮತ್ತೂ ತಮಾಷೆಯ ಸಂಗತಿ ಎಂದರೆ ಸ್ವತಃ ಸಾಯಿಬಾಬಾನೇ ತನ್ನ ವಿಶ್ವರೂಪವನ್ನು ನೋಡಿಕೊಳ್ಳಲು ಭಕ್ತರೊಂದಿಗೆ ಕಾದು ಕುಳಿತಿದ್ದರು! ಮೋಡ ಕವಿದ ವಾತಾವರಣವಿದ್ದ ಕಾರಣ ಚಂದ್ರನೇ ಕಾಣಲಿಲ್ಲ. ಅಷ್ಟೊತ್ತಿಗಾಗಲೇ ಭಕ್ತರ ಮಧ್ಯ ಇದ್ದ 82ವರ್ಷದ ವೃದ್ಧ ಬಾಬಾ ಮಾಯವಾಗಿದ್ದರು!
ಕುಂಬಳಕಾಯಿ ಕೇಳ್ತೀನಿ ಎಂದದ್ದಕ್ಕೆ ನಮ್ಮ ವಿಚಾರವಾದಿ ಹೆಚ್. ನರಸಿಂಹಯ್ಯನವರನ್ನೂ ಹತ್ತಿರಕ್ಕೆ ಬಿಟ್ಟುಕೊಂಡಿರಲಿಲ್ಲ ಈ ಬಾಬಾ. ಇನ್ನು ಬಾಬಾರ ಬೆಡ್ರೂಂ ಹತ್ಯಾಕಾಂಡಗಳ ಬಗ್ಗೆ ಹಲವಾರು ಪುಸ್ತಕಗಳು ಇರುವುದು ಗಮನಿಸಬೇಕಾದ ವಿಚಾರ.
(ಏಜನ್ಸೀಸ್)