ಎಪಿಜೆ ಅಬ್ದುಲ್ ಕಲಾಂಗೆ ಬಸವಣ್ಣ ಪ್ರಶಸ್ತಿ ಪ್ರದಾನ
ಬೆಂಗಳೂರು, ಸೆ.29 : ವಿಧಾನಸೌಧದ ಮುಂಭಾಗದಲ್ಲಿ ನಿರ್ಮಿಸಿದ್ದ ಭವ್ಯ ವೇದಿಕೆಯ ಮೇಲೆ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರಿಗೆ 'ಬಸವಶ್ರೀ ಪುರಸ್ಕಾರ-2006" ಪ್ರದಾನ ಮಾಡಲಾಯಿತು.
ನಾನು, ನನ್ನದು, ನನ್ನಿಂದ ಎಂಬ ಅಹಂಭಾವ ತೊಡೆದು ಪರಸ್ಪರರ ನಡುವೆ ಶಾಂತಿ, ಪ್ರೀತಿ ಗಳಿಸಬೇಕಾದರೆ ಯುವಜನರಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಕಲಾಂ ಹೇಳಿದರು.
ಬಸವಣ್ಣನವರ ವಚನದ ಮೂಲಕ ತಮ್ಮ ಭಾಷಣವನ್ನು ಆರಂಭಿಸಿ ಅವರ 'ಕಾಯಕವೇ ಕೈಲಾಸ" ವಾಕ್ಯವನ್ನು ಎಲ್ಲರಿಂದಲೂ ಹೇಳಿಸಿದರು. ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಪ್ರಶಸ್ತಿಗಳಿಂದ ಬಂದ ಹಣವನ್ನು ವಿಶೇಷ ಮಕ್ಕಳ ಸೇವೆಗೆ ವ್ಯಯಿಸುತ್ತಿದ್ದೇನೆ ಎಂದು ಕಲಾಂ ಹೇಳಿದರು. ಪ್ರಶಸ್ತಿಯು ಹತ್ತು ಲಕ್ಷ ರೂ.ನಗದು, ಪುತ್ಥಳಿ ಹಾಗೂ ಫಲಕವನ್ನು ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಎಡಿಯೂರಪ್ಪ ಸೇರಿದಂತೆ ಬಿಜೆಪಿಯ ಸಚಿವರ್ಯಾರೂ ಹಾಜರಿರಲಿಲ್ಲ. ಪ್ರಶಸ್ತಿಯನ್ನು ಪ್ರದಾನ ಮಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಕಾರ್ಯಕ್ರಮಗಳಿಗೆ ಕಲಾಂ ಅವರೇ ಸ್ಪೂರ್ತಿ ಎಂದರು.
ಸಮಾರಂಭದಲ್ಲಿ ಗೃಹ ಸಚಿವ ಎಂ.ಪಿ.ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್, ಪಿ.ಬಿ.ಮಹಿಷಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಐ.ಎಂ.ವಿಠಲಮೂರ್ತಿ ಹಾಜರಿದ್ದರು.
(ದಟ್ಸ್ಕನ್ನಡ ವಾರ್ತೆ)