ವಾಚು,ಮೊಬೈಲು,ದುಡ್ಡು ತಗೊಳ್ಳಿ.. ಪ್ಲೀಸ್ ಓಟ್ ಹಾಕಿ
ಬೆಂಗಳೂರು, ಸೆ.26 : ಪುರಸಭೆ, ನಗರಸಭೆ ಸೇರಿದಂತೆ ರಾಜ್ಯದ 208 ಸ್ಥಳೀಯ ಸಂಸ್ಥೆಗಳಿಗೆ ಸೆ.28ರಂದು ಚುನಾವಣೆ ನಡೆಯಲಿದೆ. ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು(ಸೆ.26) ಬೆಳಗ್ಗೆಯಿಂದ ನಿರ್ಬಂಧ ಹೇರಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
15,000 ಅಭ್ಯರ್ಥಿಗಳು ಕಣದಲ್ಲಿದ್ದು, ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಮತದಾರರ ಸೆಳೆಯಲು ಸೀರೆ, ವಾಚು, ಮೊಬೈಲ್ ಹ್ಯಾಂಡ್ ಸೆಟ್ ವಿತರಣೆ ಜೊತೆಗೆ ಹಣವನ್ನುಸಹಾ ನೀಡುತ್ತಿದ್ದಾರೆ. ಮತದಾರ ಪ್ರಭು ಮಾತ್ರ ಮೌನವಾಗಿ ನಿಂತು, ಈ ದೊಂಬರಾಟವನ್ನು ನೋಡುತ್ತಿದ್ದಾನೆ. ಮತದಾರರಿಗೆ ವಿತರಿಸಲು ತರಿಸಲಾಗಿದ್ದ ಕಮಲದ ಗುರ್ತಿದ್ದ ಸಾವಿರಾರು ಸೀರೆಗಳನ್ನು ಬಳ್ಳಾರಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಸಚಿವರು ಮತ್ತು ಶಾಸಕರು ಸ್ಥಳೀಯ ಸಂಸ್ಥೆ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ರಾಜಕೀಯ ರಣರಂಗದಂತೆ ಚುನಾವಣಾ ಕಣ ಬದಲಾಗಿದೆ. ಪ್ರತಿಷ್ಠಿತ ಈ ಚುನಾವಣೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಎಲ್ಲಾ ಪಕ್ಷಗಳು ಸಜ್ಜಾಗಿವೆ. ಜೆಡಿಎಸ್ ಮತ್ತು ಬಿಜೆಪಿ ಪಾಲಿಗೆ ಈ ಚುನಾವಣೆ ಸತ್ವ ಪರೀಕ್ಷೆ.
ಚುನಾವಣೆಯನ್ನು ಶಾಂತಯುತವಾಗಿ ನಡೆಸಲು ವ್ಯಾಪಕ ಬಂದೋಬಸ್ತು ಮಾಡಿರುವುದಾಗಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ ಸುದ್ದಿಗಾರರಿಗೆ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)