ಬದುಕಿದವರ ಸಾಯಿಸಿದ ಹಿಂದೂ ಪತ್ರಿಕೆ : ನಟಿ ಸಿಡಿಮಿಡಿ
ಬೆಂಗಳೂರು, ಸೆಪ್ಟೆಂಬರ್ 25 : ಅವಸರವೋ, ಆತುರವೋ, ಬೇಜವಾಬ್ದಾರಿಯೋ ಅಂತೂ ಒಂದೊಂದು ಸಲ. ಪತ್ರಿಕೆಗಳಲ್ಲಿ ಹೀಗೂ ಆಗುತ್ತದೆ. ಟೀವಿ, ಇಂಟರ್ ನೆಟ್ ಸೇರಿದಂತೆ ವಿದ್ಯುನ್ಮಾನ ಮಾಧ್ಯಮಗಳಲ್ಲೂ ಇದು ಸಾಮಾನ್ಯವೇ. ಮಂಗಳವಾರ(ಸೆ.25) ಹಿಂದೂ ಪತ್ರಿಕೆಯಲ್ಲಿ ಅಂಥದ್ದೊಂದು ಅಚಾತುರ್ಯವಾಗಿದೆ!
ತಮಿಳು ಚಿತ್ರನಟಿ ನಯನತಾರಾ ಅವರ ತಾಯಿ ಮೃತಪಟ್ಟಿದ್ದಾಳೆಂದು ದಿ ಹಿಂದೂ ಪತ್ರಿಕೆಯ ಹೈದರಾಬಾದ್ ಆವೃತ್ತಿಯಲ್ಲಿ ಇಂದು ವರದಿಯಾಗಿದೆ. ಅದೂ ಮುಖಪುಟದಲ್ಲಿ. ಜೊತೆಗೆ ನಯನತಾರಾ ಫೋಟೋ ಬೇರೆ ಇದೆ. ನಯನತಾರಾ ಅವರ ತಾಯಿ ಕಮಲ ದೇವಿ ಎಂಬ 45ವರ್ಷದ ಮಹಿಳೆ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಮಧುರ ನಗರದ ನಿವಾಸಕ್ಕೆ ನುಗ್ಗಿದ ನಕ್ಸಲರ ಗುಂಪು, ಕಮಲಾದೇವಿ ಅವರನ್ನು ಕೊಲೆ ಮಾಡಿ 50ಚಿನ್ನದ ಬಿಸ್ಕತ್ತು ಮತ್ತು ನಗದು ಹಣವನ್ನು ದೋಚಿದೆ ಎಂದು ವರದಿ ವಿವರಿಸಿದೆ.
ಚೆನ್ನೈನಲ್ಲಿ ಮಂಗಳವಾರ ಬೆಳಗ್ಗೆ ಆ ಸುದ್ದಿ ನೋಡಿದ ನಯನತಾರಾಗೆ ಶಾಕ್! ಕೂಡಲೇ ಕೇರಳದಲ್ಲಿರುವ ತಮ್ಮ ತಾಯಿ ಓಮನ್ ಕುರಿಯನ್ ಅವರಿಗೆ ಫೋನ್ ಮಾಡಿದರು. ನಾನು ಕ್ಷೇಮವಾಗಿದ್ದೇನೆ ಎಂಬ ಅಮ್ಮನ ದನಿ ಕೇಳಿ ನಯನತಾರಾ ನಿಟ್ಟುಸಿರುಬಿಟ್ಟರು!
ಇಷ್ಟಕ್ಕೂ ಆಗಿದ್ದಿಷ್ಟು : ಹೆಸರಿನ ಗೊಂದಲ ಮತ್ತು ಪತ್ರಕರ್ತರ ಬೇಜವಾಬ್ದಾರಿಯಿಂದ ಈ ಸುದ್ಧಿ ಸೃಷ್ಟಿಯಾಗಿದೆ. ನಯನತಾರಾ ಎಂಬ ಜ್ಯೂನಿಯರ್ ಆರ್ಟಿಸ್ಟ್ ತೆಲುಗಿನಲ್ಲಿದ್ದಾರೆ. ಸುದ್ದಿಯನ್ನು ಖಚಿತ ಪಡಿಸಿಕೊಳ್ಳದೇ, ಖ್ಯಾತ ನಟಿ ನಯನತಾರಾ ಫೋಟೊ ಬಳಸಿಕೊಂಡು 'ದಿ ಹಿಂದೂ' ಇಂದು ನಗೆಪಾಟಲಿಗೆ ಗುರಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಯನತಾರಾ, ನನ್ನ ವಿಚಾರದಲ್ಲಿ ಅನೇಕ ಸಲ ಮಾಧ್ಯಮಗಳು ತಪ್ಪು ವರದಿ ಪ್ರಕಟಿಸಿವೆ. ಈ ಸಲ ಸುಮ್ಮನಿರುವುದಿಲ್ಲ. ನನ್ನ ವಕೀಲರ ಸಲಹೆಯಂತೆ ಮುಂದುವರೆಯುತ್ತೇನೆ ಎಂದಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)