ತಲೆ ತೆಗೆದರೂ ಗೌರವ ಅಳಿಸಲಾದೀತೆ : ಕರುಣಾ ಗುಡುಗು
ಚೆನ್ನೈ, ಸೆ.23 : ನನ್ನ ವಿರುದ್ಧ ಫತ್ವಾ ಹೊರಡಿಸಿರುವುದು ನನ್ನ ನಾಲಿಗೆ ಮತ್ತು ತಲೆಗೆ ಇರುವ ಬೆಲೆಯನ್ನು ತೋರಿಸುತ್ತದೆ ಎಂದು ಎಂ.ಕರುಣಾನಿಧಿ ವ್ಯಂಗ್ಯವಾಡಿದ್ದಾರೆ.
ಜನತೆ ನನ್ನೊಂದಿಗಿರುವ ತನಕ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಕರುಣಾನಿಧಿ ಗುಡುಗಿದ್ದಾರೆ.
ತಲೆ ತಗೆದರೇನು ಸಾಹಿತ್ಯ ಕ್ಷೇತ್ರದಲ್ಲಿ, ರಾಜಕಾರಣದಲ್ಲಿ, ಸಿನೆಮಾ ರಂಗದಲ್ಲಿ ನಾನು ಗಳಿಸಿರುವ ಗೌರವ ಸಂಪತ್ತು, ಮಾಡಿದ ತ್ಯಾಗವನ್ನು ಅಳಿಸಲಾದೀತೆ ಎಂದು ಅವರು ಮರುಪ್ರಶ್ನಿಸಿದ್ದಾರೆ.
ಅವರು ಒಂದು ವೇಳೆ ತಲೆ ತೆಗೆದರೂ ಕೂಡ ಅದು ಪೋಸ್ಟ್ ಸ್ಟಾಂಪ್ ರೂಪದಲ್ಲಿ ಮರಳಿ ಬರುತ್ತದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಉಲ್ಟಾ ಹೊಡೆದ ವೇದಾಂತಿ : ಕರುಣಾನಿಧಿ ನಾಲಿಗೆ ಮತ್ತು ಕತ್ತನ್ನು ಕತ್ತರಿಸಿದವರಿಗೆ ಬಂಗಾರದ ತುಲಾಭಾರ ಮಾಡಲಾಗುವುದು ಎಂದು ಹೇಳಿದ್ದ ವಿಶ್ವ ಹಿಂದೂ ಪರಿಷತ್ ನಾಯಕ ರಾಮ್ ವಿಲಾಸ್ ವೇದಾಂತಿ ಈಗ ಉಲ್ಟಾ ಹೊಡೆದಿದ್ದಾರೆ.
ರಾತಸೇತು ಕುರಿತಾದ ತಮಿಳುನಾಡು ಮುಖ್ಯಮಂತ್ರಿ ನೀಡಿದ ಹೇಳಿಕಯನ್ನು ಖಂಡಿಸಿದ್ದೆಯಷ್ಟೇ ಅವರ ಕತ್ತನ್ನು ಕತ್ತರಿಸಬೇಕೆಂದು ಎಲ್ಲೂ ಹೇಳಿಲ್ಲ ಎಂದು ಶನಿವಾರ ಸ್ಪಷ್ಟನೆ ನೀಡಿದ್ದಾರೆ.
ನಾನು ಆ ರೀತಿ ಹೇಳಿಯೇ ಇಲ್ಲ. ನನ್ನ ಅಭಿಪ್ರಾಯವನ್ನು ಮಾಧ್ಯಮದವರು ತಿರುಚಿ ಬರೆದಿದ್ದಾರೆ ಎಂದು ವೇದಾಂತಿ ನುಡಿದಿದ್ದಾರೆ.
ಡಿಎಂಕೆ ನಾಯಕ ಕರುಣಾನಿಧಿಯ ನಾಲಿಗೆಯನ್ನು ಸಾರ್ವಜನಿಕವಾಗಿ ಸೀಳಿದವರಿಗೆ ಮತ್ತು ಕತ್ತನ್ನು ಕತ್ತರಿಸಿದವರಿಗೆ ಅಯೋಧ್ಯೆಯಲ್ಲಿ ಬಂಗಾರದ ತುಲಾಭಾರ ಮಾಡಲಾಗುವುದು ಎಂದು ವೇದಾಂತಿ ಶುಕ್ರವಾರ ಹೇಳಿದ್ದರು.
(ಯುಎನ್ಐ)