ತಮಿಳರೇ ನಿಮ್ಮ ರಕ್ಷಣೆ ನಮ್ಮ ಹೊಣೆ : ಎಂ.ಪಿ.ಪ್ರಕಾಶ್
ಬೆಂಗಳೂರು, ಸೆಪ್ಟೆಂಬರ್ 19 : ಬೆಂಗಳೂರಿನಲ್ಲಿನ ಬಸ್ ಭಸ್ಮ ಪ್ರಕರಣದಿಂದ ರಾಜ್ಯದಲ್ಲಿರುವ ತಮಿಳರು ಕಂಗೆಡುವ ಅವಶ್ಯಕತೆ ಇಲ್ಲ. ತಮಿಳರ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಎಂ.ಪಿ.ಪ್ರಕಾಶ್ ಭರವಸೆ ನೀಡಿದ್ದಾರೆ.
ಬುಧವಾರ(ಸೆ.19)ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಬಸ್ ಸುಟ್ಟ ಘಟನೆಯನ್ನು ಖಂಡಿಸಿದ್ದಾರೆ. ಸಮಾಜ ವಿರೋಧಿ ಶಕ್ತಿಗಳ ಈ ಕುಕೃತ್ಯದಿಂದ ತಮಿಳಿಗರು ಮತ್ತು ಕನ್ನಡಿಗರ ನಡುವಿನ ಬಾಂಧವ್ಯಕ್ಕೆ ಧಕ್ಕೆಯಾಗಿದೆ. ಈ ಶಕ್ತಿಗಳು ಶಾಂತಿ ಕದಡಲು ಪ್ರಯತ್ನಿಸಿದ್ದಾರೆ. ಇಂತಹ ಶಕ್ತಿಗಳನ್ನು ಸರ್ಕಾರ ಮಟ್ಟ ಹಾಕಲಿದೆ ಎಂದರು.
ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ತಪ್ಪದು. ಆ ವ್ಯಕ್ತಿಗಳು ಯಾರೇ ಆಗಿದ್ದರೂ, ಯಾವ ಸಂಘಟನೆಗೆ ಸೇರಿದ್ದರೂ, ಶಿಕ್ಷೆ ಅನುಭವಿಸಲೇ ಬೇಕು. ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಈ ಬಗ್ಗೆ ನಮ್ಮ ವಿವರಣೆ ಕೋರಿದ್ದಾರೆ. ತಮಿಳರು ಸಂರಕ್ಷಿಸುವುದಾಗಿ ಕೇಂದ್ರಕ್ಕೆ ಮತ್ತು ತಮಿಳುನಾಡು ಸರ್ಕಾರಕ್ಕೆ ನಾವು ಭರವಸೆ ನೀಡಿದ್ದೇವೆ ಎಂದು ಪ್ರಕಾಶ್ ಹೇಳಿದರು.
ಪೊಲೀಸ್ ಕಮೀಷನರ್ ನೀಲಂ ಅಚ್ಯುತ ರಾವ್ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬಸ್ ಸುಟ್ಟ ಪ್ರಕರಣ ಮತ್ತು ಕರುಣಾನಿಧಿ ಪುತ್ರಿ ಮನೆ ಮೇಲೆ ಕಲ್ಲು ತೂರಿದ ಪ್ರಕರಣಕ್ಕೂ ಏನಾದರೂ ನಂಟಿದೆಯೇ? ಅಥವಾ ಇವು ಪ್ರತ್ಯೇಕ ಪ್ರಕರಣಗಳೇ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ. ಈಗಾಗಲೇ 9ಮಂದಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದೇವೆ ಎಂದಿದ್ದಾರೆ.
ಬುಧವಾರ ಬೆಳಗ್ಗೆ 11ಗಂಟೆಯಿಂದ ತಮಿಳುನಾಡು ಮತ್ತು ಕರ್ನಾಟಕ ನಡುವಿನ ಬಸ್ ಸಂಚಾರ ಎಂದಿನಂತೆ ಮುಂದುವರೆದಿದೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.
(ಯುಎನ್ಐ)