ಕರ್ನಾಟಕ,ತಮಿಳುನಾಡು ಮಧ್ಯೆ ಬಸ್ ಸಂಚಾರ ಮತ್ತೆ ಶುರು
ಬೆಂಗಳೂರು, ಸೆಪ್ಟೆಂಬರ್ 19 : ಕಳೆದ ರಾತ್ರಿಯಿಂದ ಸ್ಥಗಿತಗೊಂಡಿದ್ದ ತಮಿಳುನಾಡು ಮತ್ತು ಕರ್ನಾಟಕ ನಡುವಿನ ಬಸ್ ಸಂಚಾರ ಇಂದು(ಸೆ.19) ಬೆಳಗ್ಗೆ 11ಗಂಟೆಯಿಂದ ಆರಂಭಗೊಂಡಿದೆ.
ರಾಮಸೇತುವಿಗೆ ಸಂಬಂಧಿಸಿದಂತೆ ಕರುಣಾನಿಧಿ ಹೇಳಿಕೆ ವಿರೋಧಿಸಿ, ಹೊಸೂರು ರಸ್ತೆಯಲ್ಲಿ ತಮಿಳುನಾಡು ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದನ್ನು ಸುಟ್ಟ ಘಟನೆ ಮಂಗಳವಾರ(ಸೆ.18) ರಾತ್ರಿ ನಡೆದಿದೆ. ಈ ಹಿನ್ನೆಲೆಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಈ ಘಟನೆಯಲ್ಲಿ ಬಸ್ಸಲ್ಲಿ ಕುಳಿತು ನಿದ್ದೆಯಲ್ಲಿ ಜಾರಿದ್ದ ಪುರುಷ ಮತ್ತು ಮಹಿಳೆ ಸುಟ್ಟು ಕರಕಲಾಗಿದ್ದಾರೆ.
ಮತ್ತೊಂದು ಕಡೆ ಮಂಗಳವಾರ ರಾತ್ರಿ ಜೆಪಿ ನಗರದಲ್ಲಿರುವ ಕರುಣಾನಿಧಿ ಪುತ್ರಿ ಸೆಲ್ವಿ ಮನೆಗೆ ಗುಂಪೊಂದು ಕಲ್ಲು ತೂರಿದೆ. ಪೊಲೀಸರು ಸೆಲ್ವಿ ಅವರ ಮನೆಗೆ ಬಿಗಿ ಭದ್ರತೆ ಒದಗಿಸಿದ್ದಾರೆ.
ಉಪಮುಖ್ಯಮಂತ್ರಿ ಹೇಳಿಕೆ : ಮೇಲಿನ ಎರಡು ಘಟನೆಗಳಿಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇವು ಕಿಡಿಗೇಡಿಗಳ ಕೃತ್ಯ. ಈ ಘಟನೆಗಳಲ್ಲಿ ಸಂಘ ಪರಿವಾರ ಭಾಗಿಯಾಗಿಲ್ಲ ಎಂದು ಬುಧವಾರ ತಿಳಿಸಿದ್ದಾರೆ.
(ಯುಎನ್ಐ)