ಶನಿವಾರ ಬೆಂಗಳೂರಿಗೆ ಏಷ್ಯಾ ಮಹಿಳಾ ವಕೀಲರ ದಂಡು
ಬೆಂಗಳೂರು, ಸೆಪ್ಟೆಂಬರ್ 19 : ಏಷ್ಯಾ ಮಹಿಳಾ ವಕೀಲರ ಸಮ್ಮೇಳನ ಸೆ.22 ಮತ್ತು 23ರಂದು ನಗರದಲ್ಲಿ ನಡೆಯಲಿದೆ. ಸಮ್ಮೇಳನಕ್ಕೆ ಏಷ್ಯಾ ಖಂಡದ ವಿವಿಧ ರಾಷ್ಟ್ರಗಳಿಂದ ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಆಗಮಿಸಲಿದ್ದಾರೆ. ಬುಧವಾರ(ಸೆ.19)ಈ ಬಗ್ಗೆ ಸುದ್ದಿಗಾರರಿಗೆ ಸಮ್ಮೇಳನದ ಸಂಚಾಲಕಿ ಶೀಲಾ ಅನೀಶ್ ವಿವರ ನೀಡಿದ್ದಾರೆ.
ಮಹಿಳಾ ಹಕ್ಕು ಮತ್ತು ಮಾನವ ಹಕ್ಕುಗಳನ್ನು ಎತ್ತಿಹಿಡಿಯುವ ಉದ್ದೇಶವನ್ನು ಸಮ್ಮೇಳನ ಹೊಂದಿದೆ. ಭಾರತದಲ್ಲಿ ಈ ಸಮ್ಮೇಳನ ಮೊದಲ ಸಲ ನಡೆಯುತ್ತಿದ್ದು, ಶ್ರೀಲಂಕಾ, ಸಿಂಗಪುರ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಪ್ರತಿನಿಧಿಗಳು ಆಗಮಿಸಲಿದ್ದಾರೆ. ಕೌಟುಂಬಿಕ ಕಲಹ ಮತ್ತು ಮಹಿಳೆಯರು ಮತ್ತು ಮಕ್ಕಳ ಶೋಷಣೆ ಬಗ್ಗೆ ವಿಚಾರಗಳು ಇಲ್ಲಿ ಮಂಡನೆಯಾಗಲಿವೆ.
ಶ್ರೀಲಂಕಾ ಹೈಕೋರ್ಟ್ ನ ನ್ಯಾಯಮೂರ್ತಿ ಕುಮುದಿನಿ ವಿಕ್ರಮೆ ಸಿಂಘೆ, ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯ ಪ್ರೊ ವಿ.ಎಸ್.ಎಲಿಜಬೆತ್, ಎನ್.ಸರಸ್ವತಿ ದೇವಿ(ಲಂಡನ್) ಮತ್ತಿತರರು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಸಮ್ಮೇಳವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
(ಯುಎನ್ಐ)