ಯಾರಿವನು ರಾಮ? ಇವ ಯಾವ ಕಾಲೇಜಿನ ವಿದ್ಯಾರ್ಥಿ?
ಈರೋಡ್ , ಸೆಪ್ಟೆಂಬರ್ 17 : ರಾಮ ಕಾಲ್ಪನಿಕ ವ್ಯಕ್ತಿ. ರಾಮನ ಹೆಸರಲ್ಲಿ ಕೋಮುವಾದಿ ಶಕ್ತಿಗಳು ಸೇತುಸಮುದ್ರಂ ಯೋಜನೆಗೆ ಅಡ್ಡಿಪಡಿಸುವುದು ಸಲ್ಲದು. ರಾಮಸೇತು ಎಂಬುದು ಮನುಷ್ಯ ನಿರ್ಮಿತ ಸೇತುವೆ ಎಂದು ಡಿಎಂಕೆ ಮುಖಂಡ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕರುಣಾನಿಧಿ ಹೇಳಿದ್ದಾರೆ.
ಸಾರ್ವಜನಿಕ ಸಭೆಯೊಂದರಲ್ಲಿ ಅವರು ಮಾತನಾಡಿದರು. 17ಲಕ್ಷ ವರ್ಷಗಳ ಹಿಂದೆ ರಾಮ ಈ ಸೇತುವೆ ಕಟ್ಟಿದ ಎಂದು ಕೆಲವರು ಹೇಳುತ್ತಾರೆ. ಅಂದ ಹಾಗೆ ಯಾರಿವನು ರಾಮ? ಆತ ಯಾವ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದ? ಏನಾದರೂ ಪುರಾವೆ ಇದೆಯೇ ಎಂದು ಪ್ರಶ್ನಿಸಿದರು. ರಾಮನ ಹೆಸರಲ್ಲಿ ಭಾವನಾತ್ಮಕವಾಗಿ ಜನರನ್ನು ಸೆಳೆದು, ದಾರಿ ತಪ್ಪಿಸುವುದು ಸಲ್ಲದು ಇದನ್ನು ನಾವು ಸಹಿಸುವುದಿಲ್ಲ ಎಂದರು.
ಕ್ರಿಮಿನಲ್ ಮೊಕದ್ದಮೆ : ಶ್ರೀರಾಮನ ಅಸ್ತಿತ್ವದ ಬಗ್ಗೆ ಲಘುವಾಗಿ ಮಾತನಾಡಿರುವ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸೋಮವಾರ(ಸೆ.17) ವಿಹೆಚ್ಪಿ ನಿರ್ಧರಿಸಿದೆ.
1972ರಲ್ಲಿ ಕರುಣಾನಿಧಿ ರಾಮಾಯಣ ಹಾಗೂ ರಾಮಸೇತು ಕುರಿತು ಅಂಕಣ ಬರೆದಿದ್ದರು. ಈಗ ರಾಮನ ಅಸ್ತಿತ್ವದ ಪ್ರಶ್ನೆ ಕೇಳಿ ಹಿಂದೂಗಳ ಮನಸ್ಸಿಗೆ ನೋವನ್ನುಂಟು ಮಾಡಿದ್ದಾರೆಂದು ಪ್ರವೀಣ್ ಭಾಯ್ ತೊಗಾಡಿಯ ಹೇಳಿದ್ದಾರೆ. ಹಾಗಾಗಿ ಇವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.
(ಏಜನ್ಸೀಸ್)