ಮತ್ತೆ ಕಟ್ಟೆಯೊಡೆದ ಮಡಿವಾಳ ಕೆರೆ, ವಾಹನ ಸಂಚಾರ ಸ್ಥಗಿತ
ಬೆಂಗಳೂರು, ಸೆಪ್ಟೆಂಬರ್ 14: ಗುರುವಾರವೂ ಮುಂದುವರಿದ ಮಳೆಗೆ ಬೆಂಗಳೂರು ಭಾಗಶಃ ತೇಲಾಡುತ್ತಿದೆ. ಬುಧವಾರ ರಾತ್ರಿ 8 ಸೆಂ.ಮೀ. ಮಳೆ ಸುರಿದರೆ ಗುರುವಾರ ಸಾಯಂಕಾಲದಿಂದಲೇ ಪ್ರಾರಂಭವಾದ ಮಳೆ ಶುಕ್ರವಾರ ಮುಂಜಾವಿನವರೆಗೂ ಹನಿಯುತ್ತಲೇ ಇತ್ತು.
ಕಳೆದ ವರ್ಷ ಸ್ವಲ್ಪ ಬಿಡುವು ತೆಗೆದುಕೊಂಡಿದ್ದ ಮಳೆ ಈ ವರ್ಷ ಮತ್ತೆ ತನ್ನ ಆರ್ಭಟವನ್ನು ತೋರಿಸಿದೆ. ಎರಡು ವರ್ಷದ ಹಿಂದಿನಂತೆ ಬೃಹತ್ ಮಡಿವಾಳ ಕೆರೆ ಕಟ್ಟೆಯೊಡೆದಿದೆ. ಬೊಮ್ಮನಹಳ್ಳಿ, ಬೇಗೂರು ಸುತ್ತಲಿನ ಪ್ರದೇಶಗಳು ಅಕ್ಷರಶಃ ಕೆರೆಗಳಾಗಿ ಮಾರ್ಪಟ್ಟಿವೆ.
ಸಿಲ್ಕ್ಬೋರ್ಡ್ ಜಂಕ್ಷನ್ನಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ನಿರ್ಮಿಸಲಾಗುತ್ತಿರುವ ಫ್ಲೈಓವರ್ ಕಾಮಗಾರಿಯಿಂದ ಪ್ರತಿದಿನ ಕುಂಟುತ್ತ ಸಾಗುತ್ತಿದ್ದ ವಾಹನ ಸಂಚಾರ ಇಂದು ನಿಂತಲ್ಲೇ ನಿಂತುಬಿಟ್ಟಿದೆ. ರಾತ್ರಿಪಾಳಿ ಮುಗಿಸಿ ಬೆಳಿಗ್ಗೆ 6 ಗಂಟೆಗೆ ಬಿಟ್ಟ ಸಾಫ್ಟ್ವೇರ್ ಕಂಪನಿಗಳ ಬಸ್ಸುಗಳು ಮಡಿವಾಳಕ್ಕೆ ಬಂದು ತಲುಪಲು 5ರಿಂದ 6 ತಾಸು ತೆಗೆದುಕೊಳ್ಳುತ್ತಿವೆ.
ಯಾವುದು ಮೋರಿ ಯಾವುದು ರಸ್ತೆ. ವಾಹನದಲ್ಲಿ ಸಾಗುತ್ತಿದ್ದೇವೆಯೋ ದೋಣಿಯಲ್ಲಿ ಸಾಗುತ್ತಿದ್ದೇವೆಯೋ ಎಂಬಂಥ ಸ್ಥಿತಿ ಟ್ರಾಫಿಕ್ನಲ್ಲಿ ಸಿಲುಕಿಕೊಂಡವರಿಗೆ. ಮಡಿವಾಳ ಫ್ಲೈಓವರ್ ಬಳಿ ಮೊಣಕಾಲುದ್ದ ನೀರು ನಿಂತಿದ್ದರಿಂದ ಎರಡು ನಾಲ್ಕು, ಆರು, ಎಂಟು ಚಕ್ರದ ಗಾಡಿಗಳು ನಿಂತಲ್ಲೇ ನಿಂತುಬಿಟ್ಟಿವೆ.
ಮಡಿವಾಳದ ಕಡೆಯಿಂದ ನಾರಾಯಣ ಹೃದಯಾಲಯಕ್ಕೆ, ಎಲೆಕ್ಟ್ರಾನಿಕ್ ಸಿಟಿಯಿಂದ ಸೇಂಟ್ ಜಾನ್ಸ್ ಆಸ್ಪತ್ರೆಗೆ ಹೋಗುವವರು ಪರದಾಡುವ ಸ್ಥಿತಿ ತಲೆದೋರಿದೆ.
ಹೊಸೂರು ರಸ್ತೆ, ಬಿಟಿಎಂ ಲೇಔಟ್ನ ಕೆಲವು ಕಛೇರಿ, ಅಪಾರ್ಟ್ಮೆಂಟಗಳಿಗೆ ನೀರು ನುಗ್ಗಿ ಜನ ಕಚೇರಿಗೆ ಹೋಗಲಾಗದೆ, ಮನೆ ಸೇರಲಾಗದೆ ಪರದಾಡುತ್ತಿದ್ದಾರೆ. ವೃದ್ಧರು ಹಾಗೂ ಮಕ್ಕಳನ್ನು ಕೈಹಿಡಿದು ರಸ್ತೆ ದಾಡಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿವೆ.
ಚಾಮರಾಜಪೇಟೆ, ಕೋರಮಂಗಲ, ವನ್ನಾರಪೇಟೆ, ಆಡುಗೋಡಿ, ಪ್ಯಾಲೇಸ್ ಗುಟ್ಟಹಳ್ಳಿ ಮುಂತಾದೆಡೆ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ರಾತ್ರಿಯೆಲ್ಲಾ ಅಲ್ಲಿನ ಜನರು ಜಾಗರಣೆ ಮಾಡಬೇಕಾಯಿತು.
(ದಟ್ಸ್ಕನ್ನಡ ವಾರ್ತೆ)