ದೆಹಲಿಯಲ್ಲಿ ನಿಂತ ಕಿತ್ತೂರು ಚೆನ್ನಮ್ಮ : ಕನ್ನಡಿಗರಿಗೆ ಹರ್ಷ
ನವದೆಹಲಿ, ಸೆಪ್ಟೆಂಬರ್ 11 : ಬ್ರಿಟಿಷರ ವಿರುದ್ಧ ಸಮರ ಸಾರಿದ ಹೆಮ್ಮೆಯ ಕನ್ನಡತಿ ಕಿತ್ತೂರು ರಾಣಿ ಚೆನ್ನಮ್ಮ, ದೆಹಲಿಯಲ್ಲಿ ಪ್ರತಿಮೆ ರೂಪದಲ್ಲೀಗ ನಿಂತಿದ್ದಾಳೆ! ಚೆನ್ನಮ್ಮನ ಪ್ರತಿಮೆ ಅನಾವರಣವನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮಂಗಳವಾರ ನೆರವೇರಿಸಿದರು.
ದೆಹಲಿಯಲ್ಲಿನ ಸಂಸದೀಯ ವಸತಿ ಸಂಕೀರ್ಣದಲ್ಲಿ ಪ್ರತಿಮೆ ಅನಾವರಣ ಸಮಾರಂಭ ನಡೆಯಿತು. ಪ್ರಧಾನಿ ಮನಮೋಹನ್ ಸಿಂಗ್, ಗೃಹ ಸಚಿವ ಶಿವರಾಜ ಪಾಟೀಲ್, ಸ್ಪೀಕರ್ ಸೋಮನಾಥ ಚಟರ್ಚಿ, ವಿರೋಧ ಪಕ್ಷದ ನಾಯಕ ಎಲ್.ಕೆ.ಆಡ್ವಾಣಿ ಸಮಾರಂಭದಲ್ಲಿ ಹಾಜರಿದ್ದರು. ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪಿ.ಆರ್.ದೇಶಮುನ್ಸಿ, ಹಿರಿಯ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ದು, ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಕಿತ್ತೂರು ಸಂಸ್ಥಾನದ ರಾಣಿ ಚೆನ್ನಮ್ಮ ಬ್ರಿಟಿಷರ ತೆರಿಗೆ ಸಂಗ್ರಹ ಪದ್ಧತಿ, ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ವಿರೋಧಿಸಿ ದಿಟ್ಟತನ ಪ್ರದರ್ಶಿಸಿದ ವಿವರಗಳನ್ನು ಇತಿಹಾಸ ವಿವರಿಸುತ್ತದೆ. ಇಂಥ ಮಹಿಳೆಯ ಪ್ರತಿಮೆ ರಾಜಧಾನಿ ದೆಹಲಿಯಲ್ಲಿ ನಡೆದಿರುವುದು, ಸಮಸ್ತ ಕನ್ನಡಿಗರಿಗೆ ಸಂದ ಗೌರವ.
ಕಾರ್ಯಕ್ರಮದ ನೇರ ಪ್ರಸಾರ ಡಿಡಿ1 ಮತ್ತು ಚಂದನದಲ್ಲಿ ಇಂದು ಮೂಡಿಬಂತು.
(ಏಜನ್ಸೀಸ್)