ಹೆಬ್ಬಾಳ ಗ್ರೇಡ್ ಸೆಪರೇಟರ್ಗೆ ಮರು ನಾಮಕರಣ : ಬಿಡಿಎ
ಬೆಂಗಳೂರು, ಸೆ. 10 : ಹೆಬ್ಬಾಳ ಗ್ರೇಡ್ ಸೆಪರೇಟರನ್ನು ಶ್ರೀ ಕೆಂಪೇಗೌಡ ಗ್ರೇಡ್ ಸೆಪರೇಟರ್ ಎಂದು ಸೋಮವಾರ ಮರು ನಾಮಕರಣ ಮಾಡಲಾಗುತ್ತದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಗರದ ಉತ್ತರ ಭಾಗದ ಹೆಬ್ಬಾಳ ಬಳಿ ನಿರ್ಮಿಸಿರುವ ಗ್ರೇಡ್ ಸೆಪರೇಟರ್ಗೆ ಮರು ನಾಮಕರಣ ಮಾಡಬೇಕೆಂಬ ಪ್ರಾಧಿಕಾರದ ಪ್ರಸ್ತಾವನೆಗೆ ರಾಜ್ಯ ಸರಕಾರದ ಒಪ್ಪಿಗೆ ದೊರೆತಿದೆ.
ಕೆಂಪೇಗೌಡ ಗ್ರೇಡ್ ಸೆಪರೇಟರ್ ಮಧ್ಯಭಾಗದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಸಹ ಸರ್ಕಾರದ ಅನುಮೋದನೆ ದೊರೆತಿದೆ.ಈ ಹಿನ್ನೆಲೆಯಲ್ಲಿ ಪ್ರತಿಮೆ ಸ್ಥಾಪನೆಗೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಪ್ರಾಧಿಕಾರದ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ತಿಳಿಸಿದ್ದಾರೆ.
ಹೆಬ್ಬಾಳ ಬಳಿಯಿರುವ ದಕ್ಷಿಣ ಏಷ್ಯಾದಲ್ಲೇ ಬಹುದೊಡ್ಡದಾದ ಕೆಂಪೇಗೌಡ ಗ್ರೇಡ್ ಸೆಪರೇಟರ್, ಬೆಂಗಳೂರು ನಗರಕ್ಕೆ ಉತ್ತರ ಭಾಗದಿಂದ ಬರುವ ವಾಹನ ಸಂಚಾರ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಸಾಧನವಾಗಿದೆ. ಎರಡು ಕ್ಯಾರೇಜ್ ವೇ ಹಾಗೂ ಆರು ಲೇನ್ಗಳನ್ನು ಒಳಗೊಂಡಿರುವ 5.35 ಕಿ.ಮೀ.ಉದ್ದದ ಈ ಗ್ರೇಡ್ ಸೆಪರೇಟರ್ ಅನ್ನು 6.20 ಕೋಟಿ ರೂ.ವೆಚ್ಚದಲ್ಲಿ 2003ರಲ್ಲಿ ನಿರ್ಮಿಸಲಾಯಿತು.
ಇಂಡಿಯನ್ ಇನ್ಸ್ಟಿಟ್ಯೂಷನ್ ಆಫ್ ಬ್ರಿಡ್ಜ್ ಇಂಜಿನಿಯರ್ಸ್ ಆಯೋಜಿಸಿದ್ದ 9ನೇ ವಿಶಿಷ್ಟ ಬ್ರಿಡ್ಜ್ ನ್ಯಾಷನಲ್ ಅವಾರ್ಡ್ ಸ್ಪರ್ಧೆಯಲ್ಲಿ, ಈ ವಿಶಿಷ್ಟ ವಿನ್ಯಾಸಕ್ಕೆ ಮೊದಲ ಸ್ಥಾನವನ್ನು ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
(ದಟ್ಸ್ ಕನ್ನಡ ವಾರ್ತೆ)