ಹಜ್ ಪುರೋಹಿತ ಆರ್.ರೋಷನ್ಬೇಗ್ಗೆ ಹಾರ-ತುರಾಯಿ
ಹೈದರಾಬಾದ್, ಸೆಪ್ಟೆಂಬರ್ 10 : ಹಜ್ ಯಾತ್ರಾರ್ಥಿಗಳಿಗೆ ನೆರವು, ಸೌಕರ್ಯ ಮತ್ತು ಪವಿತ್ರಯಾತ್ರೆ ಮಾಡುವಾಗ ಭಕ್ತಾದಿಗಳಿಗೆ ಬೇಕಾಗುವ ಅನೇಕ ಮಾರ್ಗದರ್ಶನ ಹಾಗೂ ಸಕಲ ಅನುಕೂಲಗಳನ್ನು ಕಲ್ಪಿಸಿದ ವಿಧಾನಸಭಾ ಸದಸ್ಯ ಮತ್ತು ಹಜ್ನ ಮಾಜಿ ಸಚಿವ ಆರ್. ರೋಷನ್ ಬೇಗ್ ಅವರನ್ನು ನಗರದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಇತ್ತೀಚೆಗೆ(ಸೆ.8) ನಗರದಲ್ಲಿ ನಡೆದ ಅಖಿಲ ಭಾರತ ಎರಡನೇ ಹಜ್ ಸಮ್ಮೇಳನದಲ್ಲಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಡಾ.ವೈ.ಎಸ್.ರಾಜಶೇಖರ ರೆಡ್ಡಿ ಅವರು ಬೇಗ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ದೇಶದ ನಾನಾ ಭಾಗಗಳಿಂದ 300ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನಕ್ಕೆ ಆಗಮಿಸಿದ್ದರು. ಪ್ರಸಕ್ತ ವರ್ಷದ ಹಜ್ ಯಾತ್ರೆಗೆ 80.000 ಯಾತ್ರಾರ್ಥಿಗಳಿಗೆ ಮೆಕ್ಕಾದಲ್ಲಿ ವಸತಿ ಏರ್ಪಾಡು ಮಾಡಲಾಗಿದೆ. ಮದೀನದಲ್ಲಿ ವಸತಿ ಸೌಕರ್ಯ ಸದ್ಯದಲ್ಲೆ ಪೂರ್ಣಗೊಳ್ಳಲಿದೆ ಎಂದು ಸಮ್ಮೇಳನ ಉದ್ದೇಶಿಸಿ ಮಾತನಾಡಿದ ವಿದೇಶ ವ್ಯವಹಾರಗಳ ರಾಜ್ಯ ಸಚಿವ ಇ.ಅಹಮದ್ ತಿಳಿಸಿದರು.
1995ರ ಹಜ್ ಯಾತ್ರೆಯನ್ನು ಸ್ಮರಣೀಯವಾಗಿಸಿದ ಖ್ಯಾತಿ ಬೇಗ್ ಅವರದು. ಆ ವರ್ಷ ಕರ್ನಾಟಕ ರಾಜ್ಯದಲ್ಲಿ ಹಜ್ ಕ್ಯಾಂಪುಗಳನ್ನು ಹಮ್ಮಿಕೊಳ್ಳುವುದರ ಮೂಲಕ ಇಮಿಗ್ರೇಷನ್, ಕಸ್ಟಂ ಕ್ಲಿಯರೆನ್ಸ್ ಕಟ್ಟೆಗಳನ್ನು ಭಕ್ತಾದಿಗಳು, ಸುಸೂತ್ರವಾಗಿ ದಾಟಿ ಹೋಗುವಂತೆ ಅವರು ವ್ಯವಸ್ಥೆಗಳನ್ನು ಕಲ್ಪಿಸಿದ್ದರು. ಬೆಂಗಳೂರಿನಿಂದ ಜೆಡ್ಡಾಗೆ ನೇರ ವಿಮಾನಯಾನ ಸೌಕರ್ಯವೂ ಮಾಡಲಾಗಿತ್ತು. ಹಜ್ ಕ್ಯಾಂಪ್ ಕಲ್ಪನೆ ಭಾರತದಲ್ಲಿ ಮೊದಲು ಆರಂಭವಾದದ್ದು ಬೇಗ್ ಅವರಿಂದಲೇ.
(ಏಜನ್ಸೀಸ್)