ಇಂದು ಕೆಎಸ್ ಸಿಎ ಎಲೆಕ್ಷನ್ : ಒಡೆಯರ್ Vs ಬ್ರಿಜೇಶ್
ಬೆಂಗಳೂರು, ಸೆಪ್ಟೆಂಬರ್ 09 : ಪ್ರತಿಷ್ಠಿತ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್ ಸಿಎ) ಚುನಾವಣೆ ಪ್ರಕ್ರಿಯೆ ಮುಂದುವರೆದಿದ್ದು, ಭಾನುವಾರ ರಾತ್ರಿ 11ರ ಸುಮಾರಿಗೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಶ್ರೀಕಂಠದತ್ತ ಒಡೆಯರ್ ಮತ್ತು ಬ್ರಿಜೇಶ್ ಪಟೇಲ್ ಗುಂಪಿನ ನಡುವಿನ ಹಣಾಹಣಿ ಈ ಚುನಾವಣೆಯ ವಿಶೇಷ. ವಿಜಯ ಮಲ್ಯ ಅವರು, ಒಡೆಯರ್ ಗುಂಪನ್ನು ಬೆಂಬಲಿಸಿದ್ದಾರೆ.
ಮಧ್ಯಾಹ್ನದಿಂದ ಮತದಾನ ಆರಂಭವಾಗಿದ್ದು, ಸಂಜೆ 7ಗಂಟೆ ವರೆಗೆ ಮತದಾನ ನಡೆಯಲಿದೆ. ಅಧ್ಯಕ್ಷ ಸ್ಥಾನದ ಚುನಾವಣಾ ಕಣದಲ್ಲಿ ರಾಜ ವಂಶಸ್ಥ ಶ್ರೀಕಂಠದತ್ತ ಒಡೆಯರ್ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಯ ಹಾಲಿ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಗುಂಪಿನ ಮಾಜಿ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ಕಣದಲ್ಲಿದ್ದಾರೆ.
3 ಉಪಾಧ್ಯಕ್ಷ ಸ್ಥಾನಗಳಿದ್ದು ಪಿ.ಆರ್.ಅಶೋಕಾನಂದ, ಕೃಷ್ಣಮೂರ್ತಿ, ಪುಟ್ಟಕೆಂಪಣ್ಣ, ಎಸ್.ಕೆ.ರಾಮಧ್ಯಾನಿ, ರೋಜರ್ ಬಿನ್ನಿ, ಎಂ.ಸಿ.ಶೈಲಾರಾಧ್ಯ, ಸೈಯದ್ ಕಿರ್ಮಾನಿ ಸ್ಪರ್ಧಿಸಿದ್ದಾರೆ.
ಖಜಾಂಚಿ ಸ್ಥಾನಕ್ಕೆ ವಿ.ಜಗನ್ನಾಥ, ತಲ್ಲಂ ವೆಂಕಟೇಶ್, ಕಾರ್ಯದರ್ಶಿ ಸ್ಥಾನಕ್ಕೆ ಬ್ರಿಜೇಶ್ ಪಟೇಲ್, ಕಸ್ತೂರಿರಂಗನ್ ಸ್ಪರ್ಧಿಸಿದ್ದಾರೆ. ವ್ಯವಸ್ಥಾಪಕ ಸಮಿತಿಯ ಆರು ಸ್ಥಾನಗಳಿಗೆ 14ಮಂದಿ ಸ್ಪರ್ಧಿಸಿದ್ದಾರೆ. 1404ಮತದಾರರು ಭವಿಷ್ಯ ಬರೆಯಲಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಡಳಿತ ಕುರಿತಂತೆ ಆರೋಪಗಳ ಸರಮಾಲೆಯೇ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಕಾಯಕಲ್ಪ ತರಲು ತಾವು ಸ್ಪರ್ಧಿಸಿರುವುದಾಗಿ ಶ್ರೀಕಂಠ ದತ್ತ ಒಡೆಯರ್ ಹೇಳಿದ್ದಾರೆ. ತಾವು ಗೆದ್ದರೆ ಕೆಎಸ್ಸಿಎ ಆಡಳಿತದಲ್ಲಿ ಸುಧಾರಣೆ ತರುವುದಾಗಿ ಅವರು ವಾಗ್ದಾನ ಮಾಡಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)