ಮಾಯಾವತಿ ಅವರ ಆನೆ ಪಕ್ಷಕ್ಕೆ ಪಿ.ಜಿ.ಆರ್.ಸಿಂಧ್ಯ?
ಬೆಂಗಳೂರು, ಸೆಪ್ಟೆಂಬರ್ 08 : ರಾಜ್ಯದ ಮಾಜಿ ಗೃಹ ಮಂತ್ರಿ ಮತ್ತು ಜೆಡಿಎಸ್ ಪಕ್ಷದ ರೆಬಲ್ ನಾಯಕ ಪಿ.ಜಿ.ಆರ್. ಸಿಂಧ್ಯ, ಬಹುಜನ ಸಮಾಜ ಪಕ್ಷ(ಬಿಎಸ್ ಪಿ)ವನ್ನು ಸೇರುವ ಸಾಧ್ಯತೆಗಳಿವೆ ಎಂದು ರಾಜ್ಯ ಬಿಎಸ್ ಪಿ ಘಟಕದ ಅಧ್ಯಕ್ಷ ಬಿ.ಗೋಪಾಲ್ ಶನಿವಾರ ಸುಳಿವು ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ನಮ್ಮ ಪಕ್ಷದ ರಾಷ್ಟ್ರಾಧ್ಯಕ್ಷೆ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಅವರ ಸಮ್ಮುಖದಲ್ಲಿ ಸಿಂಧ್ಯ ಪಕ್ಷ ಸೇರಲಿದ್ದಾರೆ. ಸ್ಥಳೀಯ ಚುನಾವಣೆಗಳಿಗೆ ಬಿಎಸ್ ಪಿ ತಯಾರಿ ನಡೆಸಿದ್ದು, ಸಿಂಧ್ಯ ನಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ರಾಜ್ಯದ ಸ್ಥಳೀಯ ಸಂಸ್ಥೆಗಳನ್ನು ನಮ್ಮ ಪಕ್ಷ ದಕ್ಕಿಸಿಕೊಳ್ಳಲಿದೆ ಎಂದರು.
ಇತ್ತೀಚೆಗಷ್ಟೇ ಬೀದರ್ ನಲ್ಲಿ ನಡೆದ ನಮ್ಮ ಪಕ್ಷದ ಬೃಹತ್ ಮೆರವಣಿಗೆಯಲ್ಲಿ ಸಿಂಧ್ಯ ಪಾಲ್ಗೊಂಡಿದ್ದರು. ನಮ್ಮ ಸಿದ್ಧಾಂತಗಳ ಬಗ್ಗೆ ಅವರು ಒಲವು ಹೊಂದಿದ್ದಾರೆ.ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ ಪಿ ನಿರ್ಣಾಯಕ ಪಾತ್ರವಹಿಸಲಿದೆ. ಬೇರೆ ಪಕ್ಷಗಳಿಂದ ನಮ್ಮತ್ತ ವಲಸೆ ಬರುವ ನಾಯಕರ ಸಂಖ್ಯೆ ಹೆಚ್ಚುತ್ತಿದೆ ಎಂದು ಗೋಪಾಲ್ ಹೇಳಿದರು.
(ಯುಎನ್ಐ)