ಗುಲ್ಬರ್ಗ : ಸಿಟ್ಟಿನಿಂದ ಮೇಷ್ಟ್ರೇ ಕೊಲೆ ಮಾಡಿದರೆ ಹೇಗೆ?
ಗುಲ್ಬರ್ಗ , ಸೆಪ್ಟೆಂಬರ್ 06 : ಈ ವರ್ಷದ ಶಿಕ್ಷಕರ ದಿನಾಚರಣೆಗೊಂದು ಕಪ್ಪು ಮಚ್ಚೆ ಇಡುವಂತೆ, ಶಿಕ್ಷಕನೊಬ್ಬ ಹಂತಕನ ಸ್ಥಾನದಲ್ಲಿ ನಿಂತಿದ್ದಾನೆ!
ಆತುರ ಮತ್ತು ಅಪಾರ್ಥದ ಪರಿಣಾಮ, ಚಿಂಚೋಳಿ ತಾಲೂಕಿನ ಚಂದಾಪುರದ ಗಾಂಧಿ ಚೌಕ್ ಬಳಿ ಕೊಲೆ ನಡೆದಿದೆ. ಕೊಲೆಗೆ ಕಾರಣವಾದ ಶಿಕ್ಷಕನ ಹೆಸರು ಶ್ರೀರಂಗ ಜಾಧವ್. ಈತ ಸರ್ಕಾರಿ ಶಾಲೆಯ ಶಿಕ್ಷಕ. ಕೊಲೆಗೀಡಾದನು 17ವರ್ಷದ ವಿದ್ಯಾರ್ಥಿ ಜಗನ್ನಾಥ.
ಕೊಲೆ ಹಿನ್ನೆಲೆ : ಶ್ರೀರಂಗ ಜಾಧವ್ ತಮ್ಮ ಹೆಂಡತಿ ಶೋಭಾ ಜಾಧವ್ ಮತ್ತು ಗೆಳೆಯನೊಬ್ಬನ ಜೊತೆ ರಸ್ತೆಯಲ್ಲಿ ಬರುತ್ತಿದ್ದರು. ಈ ಸಂದರ್ಭದಲ್ಲಿ ತನ್ನ ಗೆಳೆಯನೊಬ್ಬನನ್ನ ಕರೆಯಲು ಜಗನ್ನಾಥ ಮಾಡಿದ ಸನ್ನೆಯನ್ನು, ಶ್ರೀರಂಗ ತಪ್ಪಾಗಿ ಅರ್ಥಮಾಡಿಕೊಂಡರು. ನನ್ನ ಪತ್ನಿಯನ್ನು ಕೆಣಕಲು ಈ ರೀತಿ ಮಾಡಿದ್ದಾನೆ ಎಂದು ಕೋಪಕೊಂಡು, ಜಗನ್ನಾಥನ ಬೆನ್ನ ಮೇಲೆ ಒಂದೇ ಸಮನೆ ಗುದ್ದಿದರು. ಪ್ರಜ್ಞೆ ತಪ್ಪಿದ ಜಗನ್ನಾಥ ನಂತರ ಕೊನೆ ಉಸಿರೆಳೆದ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣಾರೆ ಕಂಡರೂ ಪ್ರಾಮಾಣಿಸಿ ನೋಡು ಅನ್ನುವ ಗಾದೆ, ಆ ಸಂದರ್ಭದಲ್ಲಿ ಶಿಕ್ಷಕರಿಗೆ ಮರೆತುಹೋಗಿತ್ತು. ಈಗ ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ.
(ದಟ್ಸ್ ಕನ್ನಡ ವಾರ್ತೆ)