ಅಬ್ದುಲ್ ಕಲಾಂ ಕರ್ನಾಟಕದ ಹುಡುಗರಿಗೆ ಪಾಠ ಮಾಡ್ತಾರೆ!
ಬೆಂಗಳೂರು, ಸೆಪ್ಟೆಂಬರ್ 06 : ಪ್ರಸ್ತುತ ಅಧ್ಯಾಪಕರಾದ ಎ.ಪಿ.ಜೆ. ಅಬ್ದುಲ್ ಕಲಾಂ (ಮಾಜಿ ರಾಷ್ಟ್ರಪತಿ ಎಂದು ಕರೆಯಬೇಡಿ ಎಂದಿದ್ದರಿಂದ), ಜೆಎಸ್ಎಸ್ ಶಿಕ್ಷಣ ಸಂಸ್ಥೆಗೆ ಗೌರವ ಪ್ರಾಧ್ಯಾಪಕರಾಗಲು ತಮ್ಮ ಒಪ್ಪಿಗೆ ಸೂಚಿಸಿದ್ದಾರೆ.
ಜೆಎಸ್ಎಸ್ ಮಹಾ ವಿದ್ಯಾಪೀಠಕ್ಕೆ ಸೇರಿದ ಕಾಲೇಜುಗಳಲ್ಲಿ ವರ್ಷಕ್ಕೆ 5 ರಿಂದ 6 ಉಪನ್ಯಾಸಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಹಾಗೆಯೆ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸುವರು. ಮೈಸೂರಿನ ಜೆಎಸ್ಎಸ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಕಲಾಂ ಅವರ ಪ್ರಥಮ ಉಪನ್ಯಾಸ ಇರುತ್ತದೆ ಎಂದು ಸಂಸ್ಥೆ ತಿಳಿಸಿದೆ. ಕಲಾಂ ಅವರು ಈ ನಿರ್ಧಾರ ತೆಗೆದುಕೊಂಡಿರುವುದು ವಿದ್ಯಾರ್ಥಿಗಳಲ್ಲಿ ಸಂತಸ ಉಂಟುಮಾಡಿದೆ.
ನಿವೃತ್ತರಾದರೆ ಸಾಕಪ್ಪಾ ಎಂದು ಹಂಬಲಿಸುವ ಈ ಯುಗದಲ್ಲಿ ಇಳಿವಯಸ್ಸಿನಲ್ಲೂ ಅವರ ಬತ್ತದ ಉತ್ಸಾಹ, ದೇಶದ ಬಗೆಗಿನ ಹೆಮ್ಮೆ, ಪಾಠ ಮಾಡಬೇಕೆಂಬ ಹುಮ್ಮಸ್ಸಿಗೆ ನಾವು ಸಲಾಂ ಹೇಳಲೇಬೇಕು. ನಮ್ಮ ಕರ್ನಾಟಕದ ಶಿಕ್ಷಣ ಸಂಸ್ಥೆಗೆ ಅಧ್ಯಾಪಕರಾಗಿ ಬಂದಿರುವುದನ್ನು ನಾವು ಸ್ವಾಗತಿಸೋಣ. ಇವರ ಅನುಕರಣೀಯ ಶೈಲಿ ಎಲ್ಲ ಅಧ್ಯಾಪಕರಿಗೂ ಸ್ಪೂರ್ತಿಯಾಗಲಿ.
(ದಟ್ಸ್ಕನ್ನಡ ವಾರ್ತೆ)