ಈ ಸಲ ಧಾರವಾಡದಲ್ಲಿ ಕೃಷಿ ಮೇಳ: ನೀವೂ ಹೋಗ್ತೀರಾ?
ಧಾರವಾಡ, ಸೆಪ್ಟೆಂಬರ್ 05 : ಧಾರವಾಡ ಜಿಲ್ಲೆಯಲ್ಲಿ 2007ನೇ ಸಾಲಿನ ಕೃಷಿ ಮೇಳವನ್ನು ಸೆಪ್ಟೆಂಬರ್ 29ರಿಂದ ಅಕ್ಟೋಬರ್ 2ರವರೆಗೆ ಆಯೋಜಿಸಲಾಗುವುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಗೋಲದ್ ಅವರು ಹೇಳಿದ್ದಾರೆ.
ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಸಮೂಹ ಮಾಧ್ಯಮ ಸಮನ್ವಯ ಸಮಿತಿಯ ಸಭೆಯಲ್ಲಿ, ವಿವಿಧ ಇಲಾಖೆಯ ಅಧಿಕಾರಿಗಳು ರೈತರಿಗಾಗಿ ಹಮ್ಮಿಕೊಳ್ಳಬೇಕಾಗಿರುವ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಿದ ನಂತರ ಅವರು ಈ ವಿಷಯ ತಿಳಿಸಿದರು.
ಈ ಬಾರಿಯ ಮೇಳದಲ್ಲಿ ಪ್ರಮುಖವಾಗಿ ಪ್ರವಾಹ ಪರಿಹಾರಗಳು, ಬರಗಾಲ ಪರಿಹಾರಗಳು , ಮಳೆನೀರು ಸಂಗ್ರಹಣೆ, ಅಂತರ್ಜಲ ಮರುಭರ್ತಿ, ರೈತರಿಗಾಗಿ ಆಧುನಿಕ ಸಲಕರಣೆ, ಬಂಜರು ಭೂಮಿಯನ್ನು ಫಲವತ್ತತೆಗೊಳಿಸುವುದು, ಔಷಧಿ ಸಸ್ಯ, ಉತ್ತಮ ಬೀಜ ಮುಂತಾದ ಹಲವಾರು ವಿಷಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುವುದುದೆಂದು ಕೃಷಿ ಅಧಿಕಾರಿಗಳು ತಿಳಿಸಿದರು.
ರೈತರಿಗೆ ನೀಡುತ್ತಿರುವ ಉಪಗ್ರಹ ಆಧಾರಿತ ತರಬೇತಿಯು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಉಪಗ್ರಹ ಆಧಾರಿತ ತರಬೇತಿಯನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಎರಡು ಕಾರ್ಯಕ್ರಮಗಳನ್ನು ನೀಡುವುದರ ಜೊತೆಗೆ ಎಫ್.ಎಂ. ವಾಹಿನಿ ಮೂಲಕ ರೈತರೊಂದಿಗೆ ನೇರ ಸಂವಾದ ಕಾರ್ಯಕ್ರಮಗಳನ್ನು ಎಲ್ಲಾ ಇಲಾಖೆಯವರು ನೀಡುವಂತೆ ಜಂಟಿ ನಿರ್ದೇಶಕರು ತಿಳಿಸಿದರು.
ಸಭೆಯಲ್ಲಿ ದೂರದರ್ಶನ ಕಾರ್ಯನಿರ್ವಾಹಕರಾದ ಶ್ರೀಕಾಂತ್ ಸಿಂಗ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.