ಕರ್ನಲ್ ವಸಂತ್ ಮತ್ತು ಡಾ.ರಾಜ್ ಗೆ ರಾಯರ ಅನುಗ್ರಹ
ಬೆಂಗಳೂರು, ಆಗಸ್ಟ್ 30 : ರಾಘವೇಂದ್ರ ಸ್ವಾಮಿಗಳೆಂದರೆ ಭಾವಪರವಶರಾಗುತ್ತಿದ್ದ ರಾಜ್ಕುಮಾರ್ ಅವರಿಗೆ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ ಶ್ರೀ ರಾಘವೇಂದ್ರ ಅನುಗ್ರಹ ಮರಣೋತ್ತರ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ರಾಘವೇಂದ್ರ ಸ್ವಾಮಿಗಳು ಸಶರೀರ ಬೃಂದಾವನ ಪ್ರವೇಶಿಸಿ 336 ವಸಂತಗಳು ಸಂದ ಸಂದರ್ಭದಲ್ಲಿ ನಡೆಯುತ್ತಿರುವ ಆರಾಧನೆಯ ಎರಡನೇ ದಿನವಾದ ಗುರುವಾರ ರಾಜ್ ಪತ್ನಿ ಪಾರ್ವತಮ್ಮ ರಾಜಕುಮಾರ್ ಅವರು ರಾಜ್ ಪರವಾಗಿ ಮಂತ್ರಾಲಯದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಮಂತ್ರಾಲಯ ಮಹಾತ್ಮೆ ಚಿತ್ರದಲ್ಲಿ ರಾಯರಲ್ಲಿ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದ ರಾಜ್ಗೆ ಈ ಪ್ರಶಸ್ತಿಯನ್ನು ನೀಡಿ ಮಂತ್ರಾಲಯದ ಮಠ ಘನತೆಯನ್ನು ಹೆಚ್ಚಿಸಿಕೊಂಡಿದೆ. ಮಧ್ಯ ಆರಾಧನೆಯ ನಿಮಿತ್ತ ಮತ್ತು ರಾಜ್ಗೆ ಪ್ರಶಸ್ತಿ ಸಂದಾಯವಾಗುತ್ತಿರುವ ಹಿನ್ನೆಲೆಯಲ್ಲಿ ಮಂತ್ರಾಲಯದಲ್ಲಿ ಭಕ್ತಸಾಗರವೇ ನೆರೆದಿದೆ.
ಶಿವರಾಜ್ಕುಮಾರ್, ರಾಯರ ಅನುಗ್ರಹದಿಂದ ಜನಿಸಿದ ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್ ಆದಿಯಾಗಿ ಎಲ್ಲ ರಾಜ್ ಕುಟುಂಬ ವರ್ಗ ಮಂತ್ರಾಲಯಕ್ಕೆ ತೆರಳಿದೆ.
ಗುರುರಾಯರನ್ನು ಭಕ್ತಿಭಾವದಿಂದ ರಾಜ್ಕುಮಾರ್ ಹಾಡಿದ ಹಾಡುಗಳು ಇಂದಿಗೂ ಅತ್ಯಂತ ಜನಪ್ರಿಯ.
ಕರ್ನಲ್ ವಸಂತ್ಗೂ ಪ್ರಶಸ್ತಿ : ಕಾಶ್ಮೀರದ ಉಡಿ ಪ್ರದೇಶದಲ್ಲಿ ದೇಶದೊಳಗೆ ನುಸುಳುತ್ತಿದ್ದ ಭಯೋತ್ಪಾದಕರೊಂದಿಗೆ ಹೋರಾಡಿ ಪ್ರಾಣತ್ಯಾಗ ಮಾಡಿದ ಕನ್ನಡಿಗ ವಿ.ವಸಂತ್ ಅವರಿಗೂ ಮಂತ್ರಾಲಯ ಮಠ ರಾಘವೇಂದ್ರ ಶೌರ್ಯ ಪ್ರಶಸ್ತಿ ನೀಡುತ್ತಿದೆ.
ವಸಂತ್ ಅವರ ಕುಟುಂಬವರ್ಗ ಈ ಪ್ರಶಸ್ತಿಯನ್ನು ಮಂತ್ರಾಲಯದಲ್ಲಿ ಸ್ವೀಕರಿಸಲಿದೆ. ಪ್ರಶಸ್ತಿ 25 ಸಾವಿರ ರು. ನಗದು ಮತ್ತು ಬೆಳ್ಳಿ ಪದಕವನ್ನು ಒಳಗೊಂಡಿರುತ್ತದೆ.
(ದಟ್ಸ್ಕನ್ನಡ ವಾರ್ತೆ)