ಈ ಗೆಲುವು ಫುಟ್ ಬಾಲ್ ನವ ಯುಗಕ್ಕೆ ಮುನ್ನುಡಿಯಾಗಲಿ..
ನವದೆಹಲಿ, ಆಗಸ್ಟ್ 30 : ಭಾರತದ ಫುಟ್ಬಾಲ್ ಚರಿತ್ರೆಯನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡ ಬೇಕಾದ ಗೆಲುವು ಇದು. ಸುದೀರ್ಘ ದಿನಗಳ ನಂತರ ಭಾರತ ನೆಹರು ಕಪ್ ನ್ನು ಗೆದ್ದಿದೆ. ಫೀಪಾ ಶ್ರೇಯಾಂಕದಲ್ಲಿ ತನಗಿಂತಲೂ ಮುಂದಿದ್ದ ಸಿರಿಯಾವನ್ನು 1-0 ಗೋಲಿನಿಂದ ಸೋಲಿಸಿ ಫುಟ್ಬಾಲ್ ಪ್ರಿಯರನ್ನು ಭಾರತ ತಂಡ ಆಶ್ಚರ್ಯ ಪಡಿಸಿದೆ. ಜೊತೆಗೆ 16 ಸಾವಿರ ಪ್ರೇಕ್ಷಕರಿಂದ ಕಿಕ್ಕಿರಿದಿದ್ದ ಕ್ರೀಡಾಂಗಣವನ್ನು ಚಕಿತಗೊಳಿಸಿದೆ.
ಎನ್.ಪಿ. ಪ್ರದೀಪ್ 43ನೇ ನಿಮಿಷದಲ್ಲಿ ಹೊಡೆದ ಏಕೈಕ ಗೋಲು, ಭಾರತದ ಸಾಕರ್ ಚರಿತ್ರೆಯಲ್ಲಿ ಮರೆಯಲಾಗದ ಕ್ಷಣ. ಈ ಗೆಲುವು ತನ್ನ ಫುಟ್ಬಾಲ್ ಜೀವನದಲ್ಲೆ ಮರೆಯಲಾಗದ ಘಟನೆ. ಇದು ಮತ್ತಷ್ಟು ಅಂತಾರಾಷ್ಟ್ರೀಯ ಪಂದ್ಯಾವಳಿಗಳಿಗೆ ಸ್ಪೂರ್ತಿ ನೀಡಲಿದೆ ಎಂದು ತಂಡದ ಕ್ಯಾಪ್ಟನ್ ಬಾಯಿಚುಂಗ್ ಭೂಟಿಯ ತಿಳಿಸಿದ್ದಾರೆ. ಫೈನಲ್ನಲ್ಲಿ ನಮ್ಮ ಹುಡುಗರು ಪಾದರಸದಂತೆ ಚುರುಕಾಗಿ ಆಡಿದ್ದರಿಂದಲೆ ಗೆಲುವು ಸಾಧ್ಯವಾಯಿತು ಎಂಬುದು ಅವರ ಅಭಿಪ್ರಾಯ.
ಸುರಿದ ಹಣದ ಮಳೆ :
ಅದ್ಭುತ ಜಯ ಸಾಧಿಸಿದ ಫುಟ್ಬಾಲ್ ತಂಡದ ಮೇಲೆ ಕಾಸಿನ ಮಳೆಯೆ ಸುರಿದಿದೆ. ಆಟಗಾರರಿಗೆ 40 ಲಕ್ಷ ಅಮೆರಿಕನ್ ಡಾಲರ್ ಲಭಿಸಲಿದೆ. ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ 5 ಲಕ್ಷ ರೂ.ಗಳ ಬಹುಮಾನವನ್ನು ಪ್ರಕಟಿಸಿದ್ದಾರೆ. ಸ್ಪಾನ್ಸರರ್ ಒಎನ್ ಜಿಸಿ ಸಂಸ್ಥೆ ಆಟಗಾರರಿಗೆ ಶೇ. 100 ಬೋನಸ್ ಪ್ರಕಟಿಸಿದೆ. ಅಖಿಲ ಭಾರತ ಫುಟ್ಬಾಲ್ ಸಂಸ್ಥೆ 10 ಲಕ್ಷ ರೂಪಾಯಿಗಳ ಬಹುಮಾನವನ್ನು ಘೋಷಿಸಿದೆ.
(ಏಜನ್ಸೀಸ್)