ನೈಸ್ ಸಂಸ್ಥೆ ಜೊತೆಗಿನ ಒಪ್ಪಂದ ರದ್ದು : ರಾಜ್ಯ ಸರ್ಕಾರ
ಬೆಂಗಳೂರು, ಆಗಸ್ಟ್ 30 : ಬೆಂಗಳೂರು ಮೈಸೂರು ಕಾರಿಡಾರ್ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ, ಜಾಗತಿಕ ಟೆಂಡರ್ ಆಹ್ವಾನಿಸಲು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಈ ಮುಖಾಂತರ ನೈಸ್ ಮತ್ತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ನಡುವಿನ ಕದನ, ಹೊಸ ರೂಪ ಪಡೆದಿದೆ.
ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ನೈಸ್ ಕಂಪನಿ ಜೊತೆ 2002ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಮಾಡಿಕೊಳ್ಳಲಾಗಿದ್ದ ಒಪ್ಪಂದದ ಕೆಲವು ಅಂಶಗಳನ್ನು ಸರ್ಕಾರ ರದ್ದು ಪಡಿಸಿದೆ.
ಜಾಗತಿಕ ಟೆಂಡರ್ ಕರೆಯಲು ಸಂಪುಟ ಮುಂದಾಗಿದ್ದು, ಗ್ಲೋಬಲ್ ಇನ್ ಫ್ರಾಸ್ಟ್ರಕ್ಚರ್ ಕಂಪನಿ ಪ್ರಸ್ತಾವನೆ ಆಧಾರದ ಮೇರೆಗೆ ಟೆಂಡರ್ ಕರೆಯಲಾಗುತ್ತಿದೆ. ರಾಜ್ಯದ ಹಿತದೃಷ್ಟಿಯಿಂದ ನೈಸ್ ಜೊತೆಗಿನ ಒಪ್ಪಂದದಲ್ಲಿ ಕೆಲವು ಅಂಶಗಳನ್ನು ರದ್ದು ಪಡಿಸಲು ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿದೆ ಎಂದು ಕಂಪನಿ ಮನವರಿಕೆ ಮಾಡಿಕೊಟ್ಟಿದೆ ಎಂದು ಸಂಪುಟ ಸಭೆ ನಂತರ ಸುದ್ದಿಗಾರರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)