ಸರಗಳ್ಳನ ಬೈಕಿಗೆ ಕಟ್ಟಿ ಎಳೆದಾಡಿದ ಬಿಹಾರಿ ಪೊಲೀಸರು!
ಭಾಗಲ್ಪುರ, ಆಗಸ್ಟ್ 29 : ಸರಗಳ್ಳನೊಬ್ಬನನ್ನು ಪೋಲೀಸರು ಬೈಕಿಗೆ ಕಟ್ಟಿ ಎಳೆದಾಡಿದ ಅಮಾನವೀಯ ಘಟನೆ, ಭಾಗಲ್ಪುರ ಜಿಲ್ಲೆಯಲ್ಲಿ ನಡೆದಿದೆ. ಬಿಹಾರದಲ್ಲಿನ್ನೂ ಜಂಗಲ್ ರಾಜ್ ವ್ಯವಸ್ಥೆ ಇದೆ ಎನ್ನುವುದಕ್ಕೆ ಈ ಪ್ರಕರಣ ಜೀವಂತ ಸಾಕ್ಷಿ.
ದೇವಸ್ಥಾನದಲ್ಲಿ ಮಹಿಳೆಯೊಬ್ಬರ ಸರವನ್ನು ಕಿತ್ತುಕೊಂಡ ಮೊಹಮ್ಮದ್ ಔರಂಗಜೇಬ್(20) ಎಂಬಾತನನ್ನು ಸಾರ್ವಜನಿಕರು ಥಳಿಸಿದರು. ಅದೇ ಸಮಯಕ್ಕೆ ಅಲ್ಲಿಗೆ ಆಗಮಿಸಿದ ಎಎಸ್ಐ ಎಲ್.ಬಿ.ಸಿಂಗ್ ಮತ್ತು ಪೇದೆ ರಾಮಚಂದ್ರ ರಾಯ್ ಆರೋಪಿಯನ್ನು ವಶಕ್ಕೆ ತೆಗೆದುಕೊಂಡರು. ನಂತರ ಬೈಕಿಗೆ ಬಿಗಿದು ರಸ್ತೆಯಲ್ಲಿ ಸ್ವಲ್ಪ ದೂರದವರೆಗೆ ಎಳೆದಾಡಿದರು. ಈ ಸಂದರ್ಭದಲ್ಲಿ ಗಾಯಗೊಂಡ ಆರೋಪಿಯನ್ನು ಆಸ್ಪತ್ರೆಗೆ ಸೇರಿಸಿದರು.
ಆಸ್ಪತ್ರೆಯಲ್ಲಿ ಆರೋಪಿ ಮೃತಪಟ್ಟನೆಂಬ ವದಂತಿಯ ಹಿನ್ನಲೆಯಲ್ಲಿ ಸಾರ್ವಜನಿಕರು ಪೋಲೀಸ್ ಠಾಣೆಯ ಮೇಲೆ ಕಲ್ಲುತೂರಿದರು. ನಂತರ ಆರೋಪಿಯು ಚಿಕಿತ್ಸೆ ಪಡೆಯುತ್ತಿರುವನೆಂದು ತಿಳಿದು ಶಾಂತಚಿತ್ತರಾದರು.
ಘಟನೆಗೆ ಸಂಬಂಧಿಸಿದಂತೆ ಎಎಸ್ಐ ಮತ್ತು ಪೇದೆಯನ್ನು ಅಮಾನತು ಮಾಡಲಾಗಿದೆ. ಕಾನೂನನ್ನು ಕೈಗೆ ತೆಗೆದುಕೊಂಡು ಥಳಿಸಿದವರನ್ನೂ ವಶಕ್ಕೆ ತೆಗೆದುಕೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಅಪ್ಜಲ್ ಅಮಾನುಲ್ಲಾ ತಿಳಿಸಿದ್ದಾರೆ.
(ಏಜನ್ಸೀಸ್)