ಬಾಂಬ್ ನಿಂದ ತತ್ತರಿಸಿದ ಹೈದರಾಬಾದ್ ಪರಿಸ್ಥಿತಿ ಈಗ?
ಹೈದರಾಬಾದ್, ಆಗಸ್ಟ್ 27 : ನಗರದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣ ಖಂಡಿಸಿ ಕರೆ ನೀಡಲಾಗಿರುವ ಆಂಧ್ರಪ್ರದೇಶ ಬಂದ್ ಗೆ ಸೋಮವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸೋಮವಾರ ಬೆಳಗ್ಗೆ ನಗರದ ವಿವಿಧ ಪ್ರದೇಶಗಳಿಂದ ಬಾಂಬ್ ಬೆದರಿಕೆಯ ಅನಾಮಿಕರ ಕರೆಗಳು ಪೊಲೀಸ್ ಠಾಣೆ ತಲುಪಿವೆ. ಆ ಪ್ರದೇಶಗಳಲ್ಲಿ ಪತ್ತೆ ಕಾರ್ಯ ನಡೆದಿದೆ.
ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ತು ಬಂದ್ ಕರೆ ನೀಡಿದ್ದು, ಹೈದರಾಬಾದ್ ಮತ್ತು ತೆಲಂಗಾಣ ಪ್ರಾಂತ್ಯದಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ರಾಯಲಸೀಮೆ ಮತ್ತು ಆಂಧ್ರ ಕರಾವಳಿಯಲ್ಲಿ ಭಾಗಶಃ ಯಶಸ್ವಿಯಾಗಿದೆ.
ಅಂಗಡಿ, ಚಿತ್ರಮಂದಿರ, ರೆಸ್ಟೋರೆಂಟ್, ಪೆಟ್ರೋಲ್ ಬಂಕ್, ಶಾಲೆ, ಕಾಲೇಜು ಮತ್ತು ಖಾಸಗಿ ಕಂಪನಿಗಳು ಹೈದರಾಬಾದ್ ಮತ್ತು ಕೆಲವು ಪಟ್ಟಣಗಳಲ್ಲಿ ಬಂದ್ ಆಗಿವೆ. ರಾಜಧಾನಿ ಸೇರಿದಂತೆ ಇತರೆಡೆ ಬಸ್ ಸೇವೆಯನ್ನು ರಾಜ್ಯ ಸಾರಿಗೆ ಸಂಸ್ಥೆ ಸ್ಥಗಿತಗೊಳಿಸಿದೆ. ಬಸ್ ಡಿಪೋದಲ್ಲಿ ನಿಂತ ಬಿಜೆಪಿ ಕಾರ್ಯಕರ್ತರು, ಬಸ್ ರಸ್ತೆಗಿಳಿಯದಂತೆ ತಡೆದರು.
ಬೆಳಗ್ಗೆ ಆರ್ ಟಿಸಿ ಬಸ್ ಸೇವೆಯನ್ನು ಹೈದರಾಬಾದ್ ನಲ್ಲಿ ಆರಂಭಿಸಿತ್ತು. ಈ ಪರಿಣಾಮ 9ಬಸ್ ಗಳು ಕಿಡಿಗೇಡಿಗಳಿಂದ ಜಖಂಗೊಂಡಿವೆ. ತೆಲಂಗಾಣ ಜಿಲ್ಲೆಯಲ್ಲಿ ತೆರೆದ ಅಂಗಡಿಗಳ ಮೇಲೆ ದಾಳಿ ನಡೆದಿದೆ.
ಕೆಲವೆಡೆ ಬಲವಂತದಿಂದ ಅಂಗಡಿ ಮುಂಗಟ್ಟುಗಳ ಮುಚ್ಚಿಸಲಾಗಿದೆ. ಕೆಲವು ಅಹಿತಕರ ಘಟನೆ ಹೊರತು ಪಡಿಸಿದರೆ ಪರಿಸ್ಥಿತಿ ಹತೋಟಿಯಲ್ಲಿದೆ ಮತ್ತು ಶಾಂತಿಯುತವಾಗಿದೆ ಎಂದು ರಾಜ್ಯ ಪೊಲೀಸರು ಹೇಳಿದ್ದಾರೆ.
ಹೈದರಾಬಾದ್ ಸ್ಫೋಟದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ
(ಏಜನ್ಸೀಸ್)