ಮುನ್ನಾಭಾಯ್ಗೆ ಜಾದುಕಿ ಜಪ್ಪಿ ನೀಡಿ ಪಾಪಿಗಳಾದ ಪಾಪಣ್ಣರು
ಪುಣೆ, ಆಗಸ್ಟ್ 26 : ಜಾದು ಕಿ ಜಪ್ಪಿ ನೀಡುವುದನ್ನು ಕಲಿಸಿದವನಿಗೇ ಜಪ್ಪಿ ನೀಡುವುದು ತಪ್ಪೇ?
ತಪ್ಪು ತಪ್ಪು ತಪ್ಪು! ತಪ್ಪು ಮಾಡಿದವರು ಯರವಾಡಾ ಜೈಲಿನ ಪೊಲೀಸ್ ಪಾಪಣ್ಣರು.
ತಮ್ಮ ತಮ್ಮಲ್ಲೇ ಅಥವಾ ನೆರೆಹೊರೆಯವರಿಗೆ, ಗೆಳೆಯರಿಗೆ ಜಾದು ಕಿ ಜಪ್ಪಿ ಕೊಟ್ಟಿದ್ದರೆ ಸರಿಯಿತ್ತು. ಆದರೆ ಈ ಪೊಲೀಸ್ ಪಾಪಣ್ಣರು ಕೊಟ್ಟಿದ್ದು ಯರವಾಡಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಮುನ್ನಾಭಾಯ್ ಸಂಜಯ್ ದತ್ಗೆ. ಮುನ್ನಾಭಾಯ್ ಎಂಬಿಬಿಎಸ್ ಚಿತ್ರದಂತೆಯೇ ಸಂಜಯ್ಗೆ ಅಪ್ಪುಗೆ ನೀಡಿ ವರಿಷ್ಠ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸುಪ್ರಿಂ ಕೋರ್ಟ್ನ ಅಣತಿಯಂತೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಯರವಾಡಾ ಜೈಲಿನಿಂದ ಹೊರಬರುತ್ತಿದ್ದಂತೆಯೇ ಸಂಜುಬಾಬಾನ ಕೈಕುಲುಕಿ ಜಾದು ಕಿ ಜಪ್ಪಿ ನೀಡಿದ ಏಳು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಲಾಗಿದೆ.
ತಬ್ಬಿಕೊಂಡಿದ್ದು ಯಾರಿಗೂ ಹೇಳ್ಬೇಡಿ ಅಂತ ಅಲವತ್ತುಕೊಂಡರೂ ಕ್ಯಾಮೆರಾಗಳು ಬಿಡಬೇಕಲ್ಲ? ಈಗ ಒಬ್ಬರಿಗೊಬ್ಬರು ಸಂತೈಸಿಕೊಳ್ಳುತ್ತ ತಮ್ಮತಮ್ಮಲ್ಲೇ ಜಾದು ಕಿ ಜಪ್ಪಿಗಳನ್ನು ಕೊಡುತ್ತಿದ್ದಾರೆ ಪಾಪಣ್ಣರು.
(ಯುಎನ್ಐ)