ಹೈದರಾಬಾದ್ ಸ್ಫೋಟದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ
ಹೈದರಾಬಾದ್, ಆಗಸ್ಟ್ 26 : ನಗರದ ಎರಡು ಜನನಿಬಿಡ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗಿದ್ದು, ಇದರ ಹಿಂದೆ ಭಯೋತ್ಪಾದಕ ಸಂಘಟನೆಯ ಕೈವಾಡ ಇರಬಹುದು ಎಂದು ಶಂಕಿಸಲಾಗಿದೆ.
ಲುಂಬಿನಿ ಪಾರ್ಕ್ ಮತ್ತು ಗೋಕುಲ್ ಚಾಟ್ ಬಳಿ ಶನಿವಾರ ಸಾಯಂಕಾಲ ಹದಿನೈದು ನಿಮಿಷಗಳ ಅಂತರದಲ್ಲಿ ಸಂಭವಿಸಿದ ದುರ್ಘಟನೆಗಳಲ್ಲಿ 42 ಜನ ಸಾವಿಗೀಡಾಗಿದ್ದಾರೆ. ನೂರಕ್ಕೂ ಹೆಚ್ಚಿನ ಜನ ಗಾಯಾಳುಗಳಾಗಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಯಿದೆ.
ಸ್ಫೋಟ ಸಂಭವಿಸಿದ ಸ್ಥಳಕ್ಕೆ ಪೊಲೀಸರ ವಿಶೇಷ ದಳ ಭಾನುವಾರ ಬೆಳಿಗ್ಗೆ ಬಂದಿಳಿದಿದ್ದು, ಸ್ಫೋಟದಲ್ಲಿ ನಿಯೋಜೆಲ್-90 ಎಂಬ ರಾಸಾಯನಿಕ ಪದಾರ್ಥವನ್ನು ಬಳಸಲಾಗಿದೆ. ರಾಸಾಯನಿಕವನ್ನು ನಾಗಪುರದ ಅಮಿನ್ ಕೆಮಿಕಲ್ಸ್ ಎಂಬಲ್ಲಿ ತಯಾರಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕ್ವಾರ್ಡ್ಸ್ ಗಡಿಯಾರದ ಸಹಾಯದಿಂದ ಬಾಂಬಗಳನ್ನು ಉಡಾಯಿಸಲಾಗಿದೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.
ಇಂಥದೇ ಭಯೋತ್ಪಾದಕ ಸಂಘಟನೆಯ ಕೈವಾಡವಿದೆ ಎಂದು ಸ್ಪಷ್ಟವಾಗಿ ಈಗಲೇ ಹೇಳಲಾಗುವುದಿಲ್ಲ ಎಂದು ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಹೇಳಿದ್ದಾರೆ.
ಪೊಲೀಸರು ಈ ನಡುವೆ ಸುಮಾರು 25 ಸಂಕಿತರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಉಚಿತ ಚಿಕಿತ್ಸೆ : ಸ್ಫೋಟದಲ್ಲಿ ಹತ್ಯೆಯಾದವರ ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಘೋಷಿಸಿದ್ದಾರೆ. ಗಾಯಗೊಂಡವರಿಗೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಮತ್ತು ಸರ್ಕಾರಿ ಕೆಲಸ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
(ಯುಎನ್ಐ)