ರಾಜ್ಯ ಸಚಿವ ಸಂಪುಟದ ಪ್ರಮುಖ ನಾಲ್ಕು ತೀರ್ಮಾನಗಳು
ಬೆಂಗಳೂರು, ಆಗಸ್ಟ್ 23 : ಮಂಗಳೂರು ಸಮೀಪದಲ್ಲಿ ಪೆಟ್ರೋ ಕೆಮಿಕಲ್ ಕಾಂಪ್ಲೆಕ್ಸ್ ನಿರ್ಮಾಣ ಪ್ರಸ್ತಾವನೆಗೆ ಸಚಿವ ಸಂಪುಟ ಗುರುವಾರ ಸಮ್ಮತಿ ನೀಡಿದೆ.
ಸುಮಾರು 3590 ಕೋಟಿ ವೆಚ್ಚದಲ್ಲಿ ಈ ಕಾಂಪ್ಲೆಕ್ಸ್ ನಿರ್ಮಾಣವಾಗಲಿದ್ದು, ಸುಮಾರು ಹತ್ತು ಲಕ್ಷ ಮಂದಿಗೆ ಉದ್ಯೋಗಾವಕಾಶ ಸಿಗುವ ಸಾಧ್ಯತೆಗಳಿವೆ. ಸಭೆ ನಂತರ ಸುದ್ದಿಗಾರರಿಗೆ ಈ ವಿಚಾರವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಸವರಾಜ ಎಸ್.ಹೊರಟ್ಟಿ ತಿಳಿಸಿದ್ದಾರೆ.
2026ರ ವೇಳೆಗೆ ಈ ಯೋಜನೆ ಮುಕ್ತಾಯವಾಗಲಿದ್ದು, ಈ ಯೋಜನೆಗಾಗಿ 300 ಕಿ.ಮೀ.ಬರಡು ಭೂಮಿ ಬೇಕಾಗಿದೆ. ಇಂಥದ್ದೇ ಯೋಜನೆಗಳಿಗೆ ಗುಜರಾತ್, ಆಂಧ್ರ ಪ್ರದೇಶ, ಪಶ್ಛಿಮ ಬಂಗಾಲ, ಒರಿಸ್ಸಾ ರಾಜ್ಯಗಳು ಕೇಂದ್ರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಿವೆ. ಕರ್ನಾಟಕವೂ ಸದ್ಯದಲ್ಲಿಯೇ ಪ್ರಸ್ತಾವನೆ ಸಲ್ಲಿಸಲಿದೆ ಎಂದು ಹೊರಟ್ಟಿ ಹೇಳಿದರು.
ಹೊಸ ತಾಲೂಕು : ಹೊಸ ತಾಲೂಕುಗಳ ರಚನೆ ಸಂಬಂಧ ಶಿಫಾರಸು ಪಡೆಯಲು ನಾಲ್ಕು ಸದಸ್ಯರ ಸಮಿತಿಯನ್ನು ಸರ್ಕಾರ ರಚಿಸಲಿದೆ. ಮುಂದಿನ ಆರು ತಿಂಗಳಲ್ಲಿ ಸಮಿತಿಯಿಂದ ಸರ್ಕಾರ ಶಿಫಾರಸು ವರದಿಯನ್ನು ಪಡೆಯಲಿದೆ ಎಂದರು.
ಸುವರ್ಣ ವಿಧಾನಸೌಧ : ಸುಮಾರು 230ಕೋಟಿ ವೆಚ್ಚದಲ್ಲಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಲು ಸಂಪುಟ ಸಮ್ಮತಿ ನೀಡಿದೆ. ಮುಂದಿನ ಒಂದು ವಾರದೊಳಗೆ ಕೆಲಸ ಆರಂಭವಾಗಲಿದ್ದು, ಈ ವರ್ಷ 70ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಲಿದೆ.
ಸೀಟು ಹೆಚ್ಚಳ : 2008 ಮತ್ತು 09ನೇ ಸಾಲಿನಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಇನ್ನಿತರೆ ವೃತ್ತಿ ಪರ ಕಾಲೇಜಿನಲ್ಲಿ ಸೀಟುಗಳ ಸಂಖ್ಯೆ ಹೆಚ್ಚಿಸಲು ಸಂಪುಟ ನಿರ್ಧರಿಸಿದೆ ಎಂದು ಸಚಿವರು ವಿವರ ನೀಡಿದರು.
(ಯುಎನ್ಐ)