ಆರ್ಕುಟ್ ಅಂತರ್ಜಾಲ ವೇದಿಕೆಯಲ್ಲಿ ಕೊಲೆಗೆ ಸಂಚು?
ನವದೆಹಲಿ, ಆಗಸ್ಟ್ 21 : ಗೆಳೆತನ, ಹಗೆತನ, ರಾಗ ದ್ವೇಷಗಳಿಗೆ ವರ್ಚುವಲ್ ವೇದಿಕೆ ಕಲ್ಪಿಸಿದ್ದ ಆರ್ಕುಟ್ ಅಂತರ್ಜಾಲ ತಾಣ ಈಗ ರಿಯಲ್ ಕೊಲೆಯೊಂದಕ್ಕೆ ಸಾಕ್ಷಿಯಾಗಿದೆ.
ಆರ್ಕುಟ್ ವೇದಿಕೆಯಲ್ಲಿ ಚಿಗಿತುಕೊಂಡ ಗೆಳೆತನಗಳಿಗೆ ಅಂಕೆಯೇ ಇಲ್ಲ. ಗೆಳೆತನ ಪರಿಚಯವಾಗಿ, ಪರಿಚಯ ಪ್ರೇಮಕ್ಕೆ ತಿರುಗಿ ಅನೇಕ ಅಂತಾರಾಷ್ಟ್ರೀಯ ಮದುವೆಗಳೂ ಆಗಿವೆ. ಭಾರತ ಪಾಕಿಸ್ತಾನ ಬಾಂಧವ್ಯಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ಬೆಂಬಲಿಗರ ನಡುವೆ ವಾಗ್ಯುದ್ಧವೇ ನಡೆದಿವೆ. ಈ ಮಿಥ್ಯ ಯುದ್ಧಗಳು ವಾಸ್ತವಕ್ಕೆ ತಿರುಗಿಲ್ಲ. ಆದರೆ, ಈಗ ಕೊಲೆಯೊಂದರ ಸಂಚಿಗೆ ವೇದಿಕೆ ಕಲ್ಪಿಸಿದ್ದು ಮಾತ್ರ ವಿಪರ್ಯಾಸ.
ಆರ್ಕುಟ್ ಮುಖಾಂತರ ಗೆಳೆತನ ಬೆಳೆಸಿದ್ದ 16 ವರ್ಷದ ಬಾಲಕನೊಬ್ಬ ಏಂಜೆಲ್ ಎಂಬ 'ಮಾಯಾಜಿಂಕೆ'ಯ ಬೆನ್ನುಹತ್ತಿ ಗೆಳೆಯರಿಂದಲೇ ಅಪಹರಣಕ್ಕೊಳಗಾಗಿ ಶನಿವಾರ ರಾತ್ರಿ ಹತನಾಗಿದ್ದಾನೆ. ಆತನ ಕೊಲೆಗೆ ಸಂಚು ಹೂಡಿದ್ದು ಆರ್ಕುಟ್ ವೇದಿಕೆಯಲ್ಲಿ!
ಘಟನೆಯ ವಿವರ : ಆದ್ನನ್ ಪತ್ರಾವಾಲಾ ಎಂಬ 16ರ ಹರೆಯದ ಬಾಲಕನಿಗೆ ಏಂಜೆಲ್ ಎಂಬ ಸುಂದರಿಯನ್ನು ತೋರಿಸುತ್ತೇನೆಂದು ಆರ್ಕುಟ್ನ ಗೆಳೆಯರು ಆಸೆ ಹುಟ್ಟಿಸಿದ್ದರು. ಅದನ್ನು ನಂಬಿದ ಬಾಲಕ ಆ ಗೆಳೆಯರ ಸಂಚಿಗೆ ಬಲಿಯಾಗಿದ್ದಾನೆ.
ಆತನನ್ನು ಕೊಲೆಗೈದ ಸುಜಿತ್ ನಾಯರ್, ಆಯುಶ್ ಭಟ್ ಮತ್ತು ಹಿಮೇಶ್ ಅಂಬಾವತ್ರನ್ನು ಸೈಬರ್ ಕ್ರೈಂ ಬ್ರಾಂಚ್ನ ಪೊಲೀಸರು ಬಂಧಿಸಿದ್ದಾರೆ.
ಆತ ಕೊಲೆಯಾದ ನಂತರವೂ ಅದ್ನನ್ನ ವಿವರಗಳನ್ನು ಬದಲಿಸಲು ಪ್ರಯತ್ನಿಸಲಾಗಿದೆ. ಆತನ ಚಿತ್ರ, ವಿಡಿಯೋ, ಸಂದೇಶಗಳನ್ನು ಬದಲಿಸಲಾಗಿದೆ. ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಈ ಸಂಚಿನ ಹಿಂದೆ ಮತ್ತಿನ್ಯಾರಿದ್ದಾರೆ ಎಂದು ತನಿಖೆ ನಡೆಸಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಸೈಬರ್ ಅಪರಾಧದಲ್ಲಿ ಶೇ.42ರಷ್ಟು ಹೆಚ್ಚಳವಾಗಿದೆ. ಕಳೆದ ಮೇನಲ್ಲಿ ಯುವತಿಯೊಬ್ಬಳನ್ನು ಕೊಲೆಗೈದಿದ್ದ ಯುವಕನನ್ನು ಆರ್ಕುಟ್ನ ವಿವರಗಳ ಸಹಾಯದಿಂದ ಬಂಧಿಸಲಾಗಿತ್ತು. ಇಂಥ ಘಟನೆಗಳಿಗೆ ಸಾಕ್ಷಿಯಾಗುತ್ತಿರುವ ಆರ್ಕುಟ್ನ್ನು ನಿರ್ಬಂಧಿಸಬೇಕೆಂಬ ಕೂಗೂ ಎದ್ದಿದೆ.
ಇಂಥ ವೇದಿಕೆ ರಚನಾತ್ಮಕವೂ ಆಗಬಹುದು, ವಿಧ್ವಂಸಕವೂ ಆಗಬಹುದು ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆ.
(ಯುಎನ್ಐ)
ಪೂರಕ
ಓದಿಗೆ
:
ಭಾರತ
ಮತ್ತು
ಪಾಕ್
ಅಭಿಮಾನಿಗಳ
'ಅರ್ಕುಟ್
ಸಮರ'