ಕ್ರಿಕೆಟ್ ಜಗತ್ತಿನ ಚೂರು-ಪಾರು, ಸುದ್ದಿ ಸ್ವಾರಸ್ಯಗಳು
ಇಂಗ್ಲೆಂಡ್ನಲ್ಲಿ 21 ವರ್ಷಗಳ ನಂತರ ಇಂಗ್ಲೆಂಡನ್ನು ಟೆಸ್ಟ್ ಸರಣಿಯಲ್ಲಿ ಮಣಿಸಿದ ಹುಮ್ಮಸ್ಸಿನಲ್ಲಿರುವ ಭಾರತ ತಂಡ ಮೊದಲ ಒಂದು ದಿನದ ಕ್ರಿಕೆಟ್ ಆಟಕ್ಕೆ ಮಂಗಳವಾರ ಸಜ್ಜಾಗುತ್ತಿದೆ. ನ್ಯಾಟ್-ವೆಸ್ಟ್ ಸರಣಿಯಲ್ಲಿ ಒಟ್ಟು ಏಳು ಪಂದ್ಯಗಳನ್ನು ಭಾರತ ಆಡುತ್ತಿದೆ. ಪ್ರಥಮ ಪಂದ್ಯ ಸೌದಂಪ್ಟನ್ನಲ್ಲಿ ನಡೆಯುತ್ತಿದೆ.
*
ಎಡಗಾಲಿಗಾದ ಗಾಯದಿಂದಾಗಿ ಬಹುದಿನಗಳ ಕಾಲ ಸಕ್ರೀಯ ಕ್ರಿಕೆಟ್ನಿಂದ ದೂರ ಉಳಿದಿದ್ದ ಇಂಗ್ಲೆಂಡ್ನ ಆಲ್ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ತಂಡಕ್ಕೆ ಮತ್ತೆ ಮರಳಿದ್ದಾರೆ. ತಂಡದ ಉಪನಾಯಕನಾಗಿದ್ದರೂ ಅವರನ್ನು ಅಶಿಸ್ತಿನಿಂದಾಗಿ ಕೆಲಕಾಲ ದೂರ ಇಡಲಾಗಿತ್ತು. ವೃತ್ತಿ ಜೀವನದ ಅಮೃತಘಳಿಗೆಗಳು ಇನ್ನು ಮುಂದೆ ಬರಲಿವೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
*
ಕರಾರುವಾಕ್ ದಾಳಿಯಿಂದ ಭಾರತದ ದಂಡಿಗರನ್ನು ಕಾಡಿದ್ದ ವೇಗದ ಬೌಲರ್ ಸೈಡ್ಬಾಟಮ್ ಸೈಡ್ನಲ್ಲಾಗಿರುವ ಗಾಯದಿಂದಾಗಿ ಬಾಟಮ್ನಲ್ಲೇ ಉಳಿಯುವ ಶಂಕೆಯಿದೆ. ಪ್ರಥಮ ಪಂದ್ಯದಿಂದ ಅವರು ಹೊರಗುಳಿಯಲಿದ್ದಾರೆ. ಬ್ರಿಸ್ಟಲ್ನಲ್ಲಿ ಶುಕ್ರವಾರ ನಡೆಯಲಿರುವ ಎರಡನೇ ಪಂದ್ಯಕ್ಕೆ ಮರಳುವ ವಿಶ್ವಾಸ ಅವರು ತೋರಿದ್ದಾರೆ.
*
ಟ್ವೆಂಟಿ ಟ್ವೆಂಟಿ ಕ್ರಿಕೆಟ್ನಿಂದಾಗಿ ಅನೇಕ ಹಿರಿಯ ಕ್ರಿಕೆಟಿಗರಿಗೆ ಒಂದೆಡೆ ಸೇರುವ ಅವಕಾಶ ಲಭ್ಯವಾಗುತ್ತಿದೆ. ಬಿಸಿಸಿಐಗೆ ಸೆಡ್ಡು ಹೊಡೆದು ಝೀ ಟೆಲಿಫಿಲಂಸ್ ಪ್ರಾರಂಭಿಸಿರುವ ಇಂಡಿಯನ್ ಕ್ರಿಕೆಟ್ ಲೀಗ್ಗೆ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ವಿಶ್ವಕಪ್ಗೆ ನಿರ್ಲಕ್ಷಿತಕ್ಕೊಳಗಾದ ಅನೇಕ ಹಿರಿಯ ಆಟಗಾರರು ಸೇರಿಕೊಳ್ಳುತ್ತಿದ್ದಾರೆ. ಪಾಕಿಸ್ತಾನದ ಮಾಜಿ ಕ್ಯಾಪ್ಟನ್ ಇಂಜಮಮ್ ಉಲ್ ಹಕ್, ಮೊಹಮ್ಮದ್ ಯುಸೂಫ್, ಅಬ್ದುಲ್ ರಜಾಕ್ ಐಸಿಎಲ್ ಸೇರುವ ಉಮ್ಮೇದಿಯನ್ನು ವ್ಯಕ್ತಪಡಿಸಿದ್ದಾರೆ. ಇವರಲ್ಲಿ ಯುಸೂಫ್, ರಜಾಕ್ರನ್ನು ಟ್ವೆಂಟಿ ಟ್ವೆಂಟಿಗೆ ಕಡೆಗಣಿಸಲಾಗಿದೆ ಎಂದು ಬೇರೆಯಾಗಿ ಹೇಳಬೇಕಾಗಿಲ್ಲ.
*
ಪಾಕಿಸ್ತಾನ ತಂಡದಲ್ಲಿ ಸೆಪ್ಟೆಂಬರ್ನಲ್ಲಿ ನಡೆಯುತ್ತಿರುವ ವಿಶ್ವಕಪ್ಗಾಗಿ ಕೆಲ ಹಿರಿಯ ಕ್ರಿಕೆಟಿಗರನ್ನು ಹೊರಗಿಡಲು ಕಾರಣ ಅವರ ವಿಪರೀತ ಧಾರ್ಮಿಕತೆ ಮತ್ತು ಅವರು ಬೆಳೆಸಿರುವ ಗಡ್ಡವೇ ಕಾರಣ ಎಂಬ ಗಾಳಿ ಮಾತುಗಳು ಕೇಳಿಬರುತ್ತಿವೆ. ಈ ಸುದ್ದಿಯನ್ನು ಪೂರ್ತಿ ನಂಬಲಾಗದಿದ್ದರೂ ಅಲ್ಲಗಳೆಯಲೂ ಸಾಧ್ಯವಿಲ್ಲ ಎಂಬ ಮಾತು ಕಿವಿಯಿಂದ ಕಿವಿಗೆ ಹಬ್ಬುತ್ತಿದೆ. ಪಾಕ್ ತಂಡದಲ್ಲಿ ಆಡಲಿಚ್ಛಿಸುವವರು ಇನ್ನು ಮುಂದೆ ನುಣ್ಣಗೆ ಗಡ್ಡ ಬೋಳಿಸಿಕೊಂಡು ಬರಬೇಕೆಂಬುದು ಸದ್ಯಕ್ಕೆ ಚಲಾವಣೆಯಲ್ಲಿರುವ ಜೋಕು.
*
ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರುಗಳಾದ ಲಾನ್ಸ್ ಕ್ಲೂಸ್ನರ್ ಮತ್ತು ನಿಕಿ ಬೋಯೆ ಕೂಡ ಐಸಿಎಲ್ಗೆ ಜೈ ಎಂದಿದ್ದಾರೆ. ಇವರೊಂದಿಗೆ ವೆಸ್ಟ್ ಇಂಡೀಸ್ನ ಮಾಜಿ ನಾಯಕ ಲಾರಾ ಈಗಾಗಲೆ ಐಸಿಎಲ್ನೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
*
ಭಾರತ ತಂಡದಿಂದ ನಿರ್ಲಕ್ಷಕ್ಕೊಳಗಾಗಿರುವ ಯುವ ಆಟಗಾರರಾದ ದಿನೇಶ್ ಮೋಂಗಿಯಾ, ರೀತಿಂದರ್ ಸಿಂಗ್ ಸೋಧಿ, ಎಸ್. ಶ್ರೀರಾಂ, ಜೆಪಿ ಯಾದವ್, ಅಂಬಟಿ ರಾಯುಡು ಮೊದಲಾದವರು ಐಸಿಎಲ್ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮಾಜಿ ಕ್ರಿಕೆಟಿಗ ಸೈಯದ್ ಮುಷ್ತಾಕ್ ಅಲಿ ಅವರ ಮೊಮ್ಮಗ ಅಬ್ಬಾಸ್ ಕೂಡ ಐಸಿಎಲ್ ಸೇರಲಿದ್ದಾರೆ. ಅವರೀಗ ಮಧ್ಯಪ್ರದೇಶ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇವರೊಂದಿಗೆ ರಣಜಿ ಆಟಗಾರರಾದ ಸಚಿನ್ ದೋಲ್ಪುರೆ, ಟಿ.ಸುಧೀಂದ್ರ, ಮೊಹನೀಶ್ ಮಿಶ್ರಾ ಕೂಡ ಐಸಿಎಲ್ ಸೇರಲಿದ್ದಾರೆ.
*
ಪ್ರಸ್ತುತ ಇಂಗ್ಲೆಂಡ್ ಸರಣಿಯಲ್ಲಿ ಟೆಸ್ಟ್ನಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿ ಅತಿ ಹೆಚ್ಚು ರನ್ ಗಳಿಸಿರುವ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬಿಸಿಸಿಐನ ಕಾಂಟ್ರಾಕ್ಟ್ ಆಟಗಾರನಾಗಿ ಅರ್ಹತೆಯನ್ನು ಪಡೆದಿದ್ದಾರೆ. ತಮಿಳುನಾಡಿನ ಆರಂಭದ ಬ್ಯಾಟ್ಸ್ಮನ್ರನ್ನು ಸಿ ಗ್ರೇಡ್ ಆಟಗಾರ ಎಂದು ಪರಿಗಣಿಸಲಾಗಿದೆ. ಇದರಿಂದಾಗಿ ಅವರಿಗೆ ವಾರ್ಷಿಕ 20 ಲಕ್ಷ ರು. ವರಮಾನ ಲಭಿಸಲಿದೆ.
*
ಟೆಸ್ಟ್ ಸರಣಿಯಲ್ಲಿ ಭಾರತದ ಪರ 18 ವಿಕೆಟ್ ಉರುಳಿಸಿ ಸರಣಿ ಪುರುಷೋತ್ತಮ ಪ್ರಶಸ್ತಿ ಪುರಸ್ಕೃತನಾದ ವೇಗದ ಬೌಲರ್ ಜಾಹಿರ್ ಖಾನ್ಗೆ ಸಿ ಗ್ರೇಡ್ನಿಂದ ಬಿ ಗ್ರೇಡ್ಗೆ ಬಡ್ತಿ ದೊರೆತಿದೆ. ಟೆಸ್ಟ್ನಲ್ಲಿ ಕಂಡುಕೊಂಡಿರುವ ಉತ್ತಮ ಫಾರಂನ್ನು ಏಕದಿನದ ಪಂದ್ಯಗಳಲ್ಲಿಯೂ ಮುಂದುವರಿಸಿದರೆ ಅವರನ್ನು ಎ ಗ್ರೇಡ್ ಬಡ್ತಿ ನೀಡಲಾಗುವುದು ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.
*
ಬೌಲಿಂಗ್ನಷ್ಟೇ ವೇಗವಾಗಿ ಅಶಿಸ್ತನ್ನು ರೂಢಿಸಿಕೊಂಡಿದ್ದ ಪಾಕಿಸ್ತಾನ ಬೌಲರ್ ಶೋಯಾಬ್ ಅಖ್ತರ್ ಮೇಲಿನ ಹಾಕಿದ್ದ ದಂಡ ಮತ್ತು ಶಿಕ್ಷೆಯನ್ನು ಪಿಸಿಬಿ ಮೇಲ್ಮನವಿ ಸಮಿತಿ ಮನ್ನಾ ಮಾಡಿದೆ. ಕಳೆದ ತಿಂಗಳು ತರಬೇತಿ ಕ್ಯಾಂಪ್ನಿಂದ ಹೇಳದೆ ಕೇಳದೆ ಹೊರಹೋಗಿದ್ದ ಅಖ್ತರ್ ಮೇಲೆ 10610 ಡಾಲರ್ ದಂಡವನ್ನು ವಿಧಿಸಲಾಗಿತ್ತು. ತನ್ನ ಮೇಲ್ಮನವಿಯಲ್ಲಿ, ಕತ್ತಿನ ನೋವಿದ್ದರಿಂದಲೇ ಕ್ಯಾಪ್ಟನ್ ಶೋಯಾಬ್ ಮಲ್ಲಿಕ್ಗೆ ಹೇಳಿ ಹೋಗಿದ್ದಾಗಿ ಅಖ್ತರ್ ತಿಳಿಸಿದ್ದರು. ಅವರನ್ನು ಆಲಿಸಿದ ಸಮಿತಿ ಅವರ ಮೇಲೆ ವಿಧಿಸಿದ್ದ ದಂಡ ಮತ್ತು ಶಿಕ್ಷೆಯನ್ನು ತೆಗೆದುಹಾಕಿದೆ.