ನಡುರಾತ್ರಿ ಪಟಾಕಿ ಢಂ ಢಂ : ಶಾಸಕನಿಗೆ ಲಾಠಿ ರುಚಿ!
ಮುಂಬಯಿ, ಆಗಸ್ಟ್ 17 : ಬಿಜಾಪುರ ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ರವಿಕಾಂತ್ ಪಾಟೀಲ್ ರನ್ನು ಹಿಗ್ಗಾಮಗ್ಗ ಹೊಡೆದು, ಬಂಧಿಸಿ ನಂತರ ಜಾಮೀನಿನ ಮೇಲೆ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಹುಟ್ಟುಹಬ್ಬದ ಖುಷಿಯಲ್ಲಿ ಮಧ್ಯರಾತ್ರಿ ತನಕ ಪಟಾಕಿ ಸಿಡಿಸಿದ್ದು, ರವಿಕಾಂತ್ ಪಾಟೀಲರ ಬಂಧನಕ್ಕೆ ಮುಖ್ಯ ಕಾರಣ. ಪಾಟೀಲರ ಗುಂಪು ಸಂಭ್ರಮಾಚರಣೆ ನಡೆಸುತ್ತಿದ್ದ ಪ್ರದೇಶದಲ್ಲಿಯೇ ಸೊಲ್ಲಾಪುರ ಪೊಲೀಸ್ ಆಯುಕ್ತ ಅಶೋಕ್ ಕಾಮ್ಟೆ ಅವರ ಮನೆಯೂ ಇದೆ. ಪಟಾಕಿ ಸಿಡಿಸಲು ಅಶೋಕ್ ಕಾಮ್ಟೆ ಆಕ್ಷೇಪ ವ್ಯಕ್ತಪಡಿಸಿದ್ದು ಪಾಟೀಲರ ಗುಂಪಿಗೆ ಇಷ್ಟವಾಗಲಿಲ್ಲ.
ಅವರ ಮಾತಿಗೆ ಕಿವಿಕೊಡದೇ, ಪಟಾಕಿ ಸಿಡಿಸಿದ್ದರಿಂದ ಅಶೋಕ್ ಕಾಮ್ಟೆ ಕೋಪಗೊಂಡರು. ಕೂಡಲೇ ಪಾಟೀಲರನ್ನು ಬಂಧಿಸಿ, ಠಾಣೆಗೆ ಎಳೆದೊಯ್ದರು. ಈ ಸಂದರ್ಭದಲ್ಲಿ ಘರ್ಷಣೆ ನಡೆದು, ಪಾಟೀಲ ಗಾಯಗೊಂಡರು.
ಪಾಟೀಲರ ಸೋದರರು ಪೊಲೀಸ್ ಆಯುಕ್ತ ಅಶೋಕ್ ಕಾಮ್ಟೆ ವಿರುದ್ಧ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ ರಾವ್ ದೇಶಮುಖ್ ಮತ್ತು ರಾಜ್ಯಪಾಲ ಎಸ್.ಎಂ.ಕೃಷ್ಣ ಅವರಿಗೆ ದೂರು ನೀಡಿದ್ದಾರೆ.
(ಏಜನ್ಸೀಸ್)