ರಾಜಧಾನಿ ಸೇರಿದಂತೆ ಎಲ್ಲೆಡೆ ದೇಶಪ್ರೇಮದ ಭಾರೀ ಹೊಳೆ
ನವದೆಹಲಿ, ಆಗಸ್ಟ್ 15 : ಬಿಗಿಭದ್ರತೆಯ ಮಧ್ಯೆ ರಾಜಧಾನಿ ನವದೆಹಲಿ ಸೇರಿದಂತೆ ದೇಶದೆಲ್ಲೆಡೆ ಸಂಭ್ರಮ ಸಡಗರದ 60ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬುಧವಾರ ಆಚರಿಸಲಾಗುತ್ತಿದೆ.
ಭಯೋತ್ಪಾದಕರ ಬೆದರಿಕೆ ಹಿನ್ನೆಲೆಯಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 10,500 ಮಿಲಿಟರಿ ಸಿಬ್ಬಂದಿ ಮತ್ತು ಪೊಲೀಸರು ನವದೆಹಲಿಯಲ್ಲಿ ಭದ್ರತಾ ಕಾರ್ಯದಲ್ಲಿ ತೊಡಗಿದ್ದರು. ಬೆಳಗ್ಗೆ ಕೆಂಪುಕೋಟೆಯ ಮೇಲೆ ಪ್ರಧಾನಿ ಮನಮೋಹನ್ ಸಿಂಗ್ ರಾಷ್ಟ್ರಧ್ವಜ ಹಾರಿಸಿ, ಗೌರವ ಸಲ್ಲಿಸಿದರು. ನಂತರ ರಾಷ್ಟ್ರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದುದ್ದಕ್ಕೂ ಭಾರತೀಯ ವಾಯುಪಡೆ ಹೆಲೆಕಾಪ್ಟರ್ ಗಳು ಆಕಾಶದಲ್ಲಿ ಹಾರುತ್ತಿದ್ದವು. ಭಯೋತ್ಪಾದಕರ ವೈಮಾನಿಕ ದಾಳಿ ಸಾಧ್ಯತೆಗಳ ಅರಿಯಲು ಈ ಕ್ರಮ ಕೈಗೊಳ್ಳಲಾಗಿತ್ತು. ದೇಶದ ಬಸ್ಸು, ರೈಲು, ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸಲಾಗಿದೆ.
ಬೆಂಗಳೂರು ವರದಿ : ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮಗಳು ನಡೆದವು. ಬೆಂಗಳೂರಿನ ರಸ್ತೆಗಳಲ್ಲಿ ವಾಹನ ದಟ್ಟನೆ ಎಂದಿಗಿಂತಲೂ ತುಸು ಕಡಿಮೆಯಿದ್ದು, ವಾಹನಗಳ ಮೇಲೆ ರಾಷ್ಟ್ರಧ್ವಜ ಕಂಡುಬರುತ್ತಿದೆ. ನಗರದ ವಿವಿಧೆಡೆ ರಾಷ್ಟ್ರ ಧ್ವಜ ಮತ್ತು ಬ್ಯಾಡ್ಜ್ ಗಳ ಮಾರಾಟ ಭರದಿಂದ ಸಾಗಿದೆ.
(ಏಜನ್ಸೀಸ್)