ಅಂಗಾಂಗ ದಂಧೆ ಅಕ್ರಮ ತಡೆಗಟ್ಟಲು ಸರ್ಕಾರದ ಕ್ರಮ
ಬೆಂಗಳೂರು, ಆಗಸ್ಟ್ 14 : ಮಾನವ ಅಂಗಾಂಗಗಳ ಅಕ್ರಮ ದಂಧೆಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕಾನೂನನ್ನು ಸರ್ಕಾರ ಜಾರಿಗೆ ತರಲಿದೆ ಎಂದು ಆರೋಗ್ಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಮೂತ್ರಪಿಂಡಗಳನ್ನು ಅಕ್ರಮವಾಗಿ ಮಾರಾಟಮಾಡುವ ಅಕ್ರಮ ದಂಧೆಗಿಳಿದಿದ್ದ ಮೂವರನ್ನು ನೆಲಮಂಗಲದಲ್ಲಿ ಬಂಧಿಸಿರುವ ಹಿನ್ನೆಲೆಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಅಶೋಕ್ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡುತ್ತಿದ್ದರು.
ಅಕ್ರಮವಾಗಿ ಕಿಡ್ನಿ ಕಸಿ ಮಾಡುವ ಕಾಯಕದಲ್ಲಿ ಕೆಲ ವಕೀಲರ ಮತ್ತು ಕೆಲ ಆಸ್ಪತ್ರೆಗಳ ಕೈವಾಡವಿರುವುದು ಸರ್ಕಾರದ ಆತಂಕ ಹೆಚ್ಚಿಸಿದೆ. ಕೇವಲ 50 ಸಾವಿರ ರು.ಗಳ ಆಸೆಯಿಂದ ರೈತರೂ ಸೇರಿದಂತೆ ಅನೇಕರು ಕಿಡ್ನಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಕಡಿಮೆ ಬೆಲೆಗೆ ಕೊಂಡಿದ್ದ ಮೂತ್ರಕೋಶಗಳನ್ನು ಏಳೆಂಟು ಪಟ್ಟು ಹೆಚ್ಚಿನ ಬೆಲೆಗೆ ಬಂಧಿತ ಆರೋಪಿಗಳು ಮಾರಾಟ ಮಾಡುತ್ತಿದ್ದರು.
ಮೂತ್ರಕೋಶ ಕಸಿ ಮಾಡುವಾಗ ಅನುಸರಿಸುವ ಕ್ರಮದಲ್ಲಿರುವ ಲೋಪದೋಷಗಳನ್ನು ಮುಚ್ಚಿಹಾಕುವ ಎಲ್ಲ ಪ್ರಯತ್ನಗಳನ್ನು ಸರ್ಕಾರ ಮಾಡಲಿದೆ ಎಂದು ಅಶೋಕ್ ಹೇಳಿದರು.
ಅಂಗ ಕಸಿಗೆ ಅನುಮತಿ ನೀಡುವ ಸಮಿತಿಯ ಕಣ್ಣಿಗೆ ಮಣ್ಣೆರಚಿ ದಾನಿ ಮತ್ತು ದಾಹಿಗಳ ಸಂಬಂಧ ಪುಷ್ಟೀಕರಿಸಲು ನಕಲಿ ಅಫಿಡವಿಟ್ ಅನ್ನು ಆರೋಪಿಗಳು ಸೃಷ್ಟಿಸುತ್ತಿದ್ದರು.
ರಾಜ್ಯದಲ್ಲಾಗುತ್ತಿರುವ ಅಕ್ರಮದ ಪ್ರಮಾಣವನ್ನು ತಿಳಿದುಕೊಳ್ಳಲು ವಿಶೇಷ ಪಡೆಯನ್ನು ರಚಿಸಲಾಗುವುದು ಮತ್ತು ಅಪರಾಧಿಗಳನ್ನು ಮಟ್ಟಹಾಕಲು ತಕ್ಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ವಿವರಣೆ ನೀಡಿದರು.
(ಯುಎನ್ಐ)