ಇನ್ಮುಂದೆ ಆಟೋ ಚಾಲಕರಿಗೆ ಇಸ್ಕಾನ್ ನಿಂದ ಮೃಷ್ಟಾನದ ಊಟ
ಬೆಂಗಳೂರು, ಆಗಸ್ಟ್ 12: ಶಾಲಾ ಮಕ್ಕಳು ಹಾಗೂ ಜೈಲಿನ ಖೈದಿಗಳಿಗೆ ಮೃಷ್ಟಾನ ಭೋಜನವನ್ನು ಉಣಬಡಿಸಿದ ನಂತರ, ಇಸ್ಕಾನ್ ಹರೇ ಕೃಷ್ಣ ಪಂಥದವರು ಈಗ ಆಟೋ ಚಾಲಕರತ್ತ ತಿರುಗಿದ್ದಾರೆ.
ಅಕ್ಷಯ ಪಾತ್ರಾ ಫೌಂಡೇಶನ್ ಮತ್ತು ಆದರ್ಶ ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಯುನಿಯಾನ್ ರವರ ಜಂಟಿ ಯೋಜನೆಯ ಫಲವಾಗಿ ಆಟೋ ಚಾಲಕರು ಮಧ್ಯಾಹ್ನದ ಬಿಸಿಯೂಟ ತಿನ್ನುವಂತಾಗಿದೆ.
ಶುದ್ಧ ಶಾಖಾಹಾರಿ ಊಟದ ಬೆಲೆ 10 ರು ಎಂದು ವಿಧಿಸಲಾಗಿದೆ. ಇದರಲ್ಲಿ ಅನ್ನ, ಸಂಬಾರ್, ಮೊಸರು ಹಾಗೂ ಹಪ್ಪಳ ಸೇರಿರುತ್ತೆ.ಬೇಕಾದಷ್ಟು ಉಣಬಹುದಾಗಿದೆ.
ಇಸ್ಕಾನ್ ಸಂಸ್ಥೆ ಮಹಾರಾಷ್ಟ್ರದಲ್ಲಿ ಈ ರೀತಿಯ ಯೋಜನೆಯನ್ನು ಹಮ್ಮಿಕೊಂಡಿದ್ದನ್ನು ತಿಳಿದುಕೊಂಡು, ಇಲ್ಲಿ ಕೂಡ ಯೋಜನೆಯನ್ನು ವಿಸ್ತರಿಸುವಂತೆ ಕೇಳಿಕೊಳ್ಳಲಾಯಿತು, ಅದರಂತೆ ನಗರದ 10 ಕಡೆ ಬಿಸಿಯೂಟ ನೀಡಲು ಇಸ್ಕಾನ್ ಸಂಸ್ಥೆ ಒಪ್ಪಿಗೆ ಸೂಚಿಸಿತು ಎಂದು ಆಟೋ ಚಾಲಕರ ಸಂಘದ ಕಾರ್ಯದರ್ಶಿ ಸಂಪತ್ ಕುಮಾರ್ ಹೇಳುತ್ತಾರೆ.
ಇಸ್ಕಾನ್ ವಾಹನ ನಿಲುಗಡೆಯ ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಬಗ್ಗೆ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಕೆ.ಸಿ. ರಾಮಮೂರ್ತಿಯವರನ್ನು ಕೇಳಲಾಗಿದ್ದು, ಒಪ್ಪಿಗೆ ನೀಡಿದ್ದಾರೆ. ಇದರಿಂದ ಪ್ರತಿದಿನ ಸುಮಾರು 5 ಸಾವಿರ ಆಟೋ ಚಾಲಕರಿಗೆ ಊಟ ದೊರೆತಂತಾಗುತ್ತಿದೆ ಎಂದು ಸಂಪತ್ ಕುಮಾರ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)