ಮಳೆ ಕುಗ್ಗಿದರೂ ತಗ್ಗದ ನೆರೆ : 4 ಸಾವಿರ ಕೋಟಿ ರು. ಹಾನಿ
ಬೆಂಗಳೂರು, ಆಗಸ್ಟ್ 11 : ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಒಟ್ಟು 4 ಸಾವಿರ ಕೋಟಿ ರು. ಹಾನಿ ಸಂಭವಿಸಿದ್ದು, ಕೂಡಲೆ 500 ಕೋಟಿ ರು. ಬಿಡುಗಡೆ ಮಾಡಬೇಕೆಂದು ಕೇಂದ್ರವನ್ನು ರಾಜ್ಯ ಆಗ್ರಹಿಸಲಿದೆ.
ಮಳೆಯ ಆಟಾಟೋಪದಿಂದಾಗಿರುವ ಹಾನಿಯ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರಿಹಾರಕ್ಕಾಗಿ ಕೇಂದ್ರದ ನೆರವು ಕೇಳುವುದಾಗಿ ಹೇಳಿದ್ದಾರೆ.
ಮಳೆಯ ಪ್ರಮಾಣ ತುಸು ಕಡಿಮೆಯಾಗಿದ್ದರೂ ಜಲಾಶಯಗಳೆಲ್ಲ ತುಂಬಿರುವುದರಿಂದ ಹೆಚ್ಚಿನ ನೀರನ್ನು ಹೊರಬಿಡಲಾಗುತ್ತಿದೆ. ಜಲಾನಯನ ಪ್ರದೇಶಗಳಲ್ಲಿ ಒಂದು ಲಕ್ಷ ಹೆಕ್ಟೇರ್ಗೂ ಹೆಚ್ಚಿನ ಪ್ರದೇಶ ಜಲಾವೃತವಾಗಿದೆ. ಸುಮಾರು 80 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಮಳೆಯಿಂದ ಹಾನಿ ಸಂಭವಿಸಿದೆ. 10 ಲಕ್ಷಕ್ಕೂ ಹೆಚ್ಚಿನ ಜನ ನಿರಾಶ್ರಿತರಾಗಿದ್ದಾರೆ. ಉತ್ತರ ಕನ್ನಡ, ಹಾವೇರಿ, ಬೆಳಗಾವಿ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ.
ಏಪ್ರಿಲ್ನಿಂದ 242 ಜನ ಮಳೆಯಿಂದಾಗಿ ಮೃತಪಟ್ಟಿದ್ದರೆ, ಇದೇ ತಿಂಗಳಲ್ಲಿ ಕಳೆದ ನಾಲ್ಕಾರು ದಿನಗಳಲ್ಲಿ 34 ಜನ ಬಲಿಯಾಗಿದ್ದಾರೆ. ಮೃತರ ಕುಟುಂಬಕ್ಕೆ ತಲಾ ಒಂದು ಲಕ್ಷ ರು.ಮಂಜೂರು ಮಾಡಲಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
50 ಕೋಟಿ ರು. ಬಿಡುಗಡೆ ಮಾಡಿದ್ದರೂ ಇನ್ನೂ ಹೆಚ್ಚಿನ ನೆರವಿನ ಅಗತ್ಯವಿರುವುದರಿಂದ ಪ್ರಧಾನಿ ಮನಮೋಹನ ಸಿಂಗ್ ಮತ್ತು ಕೇಂದ್ರ ಗೃಹಸಚಿವ ಶಿವರಾಜ್ ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸಿ ಹೆಚ್ಚಿನ ನೆರವನ್ನು ಕೋರುವುದಾಗಿ ಕುಮಾರಸ್ವಾಮಿ ನಿರ್ಧರಿಸಿದ್ದಾರೆ.
ಶನಿವಾರ ನೆರೆಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸುವುದಾಗಿ ಅವರು ಹೇಳಿದ್ದಾರೆ.
ಮತ್ತೆ ಐವರ ಮರಣ : ಮಳೆಯ ಹೊಡೆತ ತುಸು ತಗ್ಗಿದ್ದರೂ ಅನೇಕ ಜಿಲ್ಲೆಗಳಲ್ಲಿ ನೆರೆಯ ಹಾವಳಿ ತಗ್ಗಿಲ್ಲ. ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಾತ್ರ ಮಳೆಯ ಆರ್ಭಟ ಮುಂದುವರೆದಿದೆ.
ಬಾಗಲಕೋಟ ಜಿಲ್ಲೆಯ ಮುರನಾಳ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಘಟಪ್ರಭಾ ನದಿಯ ಸೆಳೆತಕ್ಕೆ ಸಿಲುಕಿ ಮೃತನಾಗಿದ್ದಾನೆ. ಕೆರೂರಿನ ಮಲಪ್ರಭಾ ನದಿಯಲ್ಲಿ ಮುಳುಗಿ ವೃದ್ಧ ಮಹಿಳೆ ಸಾವಿಗೀಡಾಗಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಒಬ್ಬ ಸತ್ತಿದ್ದು, ಇನ್ನಿಬ್ಬರು ಕಾಣೆಯಾಗಿದ್ದಾರೆ.
(ದಟ್ಸ್ಕನ್ನಡ ವಾರ್ತೆ)