ಭಾರತ ನೆರೆ ಹಾವಳಿ ಸಂತ್ರಸ್ತರಿಗೆ ಅಮೆರಿಕಾ ನೆರವು
ನವದೆಹಲಿ, ಆಗಸ್ಟ್ 10 : ಈಚಿನ ವಾರಗಳಲ್ಲಿ ಅತೀವೃಷ್ಟಿ ಪೀಡಿತವಾಗಿರುವ ಅಸ್ಸಾಂ ಹಾಗೂ ಬಿಹಾರ ರಾಜ್ಯಗಳ ನೆರೆ ಹಾವಳಿ ಸಂತ್ರಸ್ತರಿಗೆ 20 ಲಕ್ಷ ರೂ. (ಸುಮಾರು 50 ಸಾವಿರ ಡಾಲರ್) ಮಾನವೀಯ ನೆರವು ನೀಡುವುದಾಗಿ ಭಾರತದಲ್ಲಿನ ಅಮೆರಿಕಾ ರಾಯಭಾರಿ ಡೇವಿಡ್ ಸಿ. ಮಲ್ಫೋರ್ಡ್ ಶುಕ್ರವಾರ ಪ್ರಕಟಿಸಿದ್ದಾರೆ.
ಈ ಹಣವನ್ನು ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ಸಲ್ಲಿಸಲಾಗುವುದು.
ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ರಾಯಭಾರಿ ಮಲ್ಫೋರ್ಡ್ ಅವರು, ಈ ವರ್ಷದ ಮಳೆಗಾಲ ಆರಂಭವಾದಾಗಿನಿಂದ ಉಂಟಾಗಿರುವ ಅತಿವೃಷ್ಟಿ ಹಾಗೂ ಭಾರೀ ನೆರೆ ಹಾವಳಿಯಿಂದ ಲಕ್ಷಾಂತರ ಜನ ಸಂತ್ರಸ್ತರಾಗಿರುವ ಕುರಿತು ಅಮೆರಿಕಾದ ಜನತೆ ಹಾಗೂ ಸರಕಾರದ ಪರವಾಗಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಈ ನೆರವನ್ನು ಅಮೆರಿಕಾ ರಾಯಭಾರಿಗಳ ಮಾನವೀಯ ಪರಿಹಾರ ನಿಧಿಯ ಮುಖಾಂತರ ಕೊಡಮಾಡಲಾಗಿದೆ. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ನೆರವು ನೀಡಲು ಅಮೆರಿಕಾ ಸಿದ್ಧವಿದೆ ಎಂಬ ಇಂಗಿತವನ್ನೂ ರಾಯಭಾರಿ ಮಲ್ಫೋರ್ಡ್ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಕೂಡ ನೆರೆಹಾವಳಿಯಿಂದಾಗಿ ಸುಮಾರು ಸಾವಿರ ಕೋಟಿ ರು. ನಷ್ಟವಾಗಿದೆ. ಮುನ್ನೂರು ಕೋಟಿ ರು.ಗಳನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಕೇಂದ್ರವನ್ನು ರಾಜ್ಯ ಆಗ್ರಹಿಸಿದೆ. ಭಾರತಕ್ಕೆ ಅಮೆರಿಕದಿಂದ ಕೂಡ ನೆರೆಹಾವಳಿಗಾಗಿ ಪರಿಹಾರ ಹರಿದುಬರುತ್ತಿರುವುದರಿಂದ ರಾಜ್ಯಕ್ಕೂ ಪರಿಹಾರ ಧನ ದೊರೆಯಬಹುದೆಂಬ ಆಶಾಭಾವನೆ ವ್ಯಕ್ತವಾಗಿದೆ.