ಬೆಳಗಾವಿಯಲ್ಲಿ ಓಪಿಯಂ, ನಾಲ್ವರ ವಶ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 3 ಕೋಟಿ ಬೆಲೆಬಾಳುವ 3 ಕೆ.ಜಿ. ಓಪಿಯಂ ಮಾದಕ ವಸ್ತುವನ್ನು ಬೆಳಗಾವಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.
ಸಮೀಪದ ಹತ್ತರಗಿ ಬಳಿ ಗಿರಾಕಿಗಳಿಗಾಗಿ ಕಾಯುತ್ತಿದ್ದ ಗೋವಾದ ಇಬ್ಬರು ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತರನ್ನು ಹುಬ್ಬಳ್ಳಿಯ ಸ್ಟ್ಯಾನ್ಲಿ ಶಾಂತರಾಜ್ ಹಿರೆಕೇರೂರ ಮತ್ತು ರಾಘವೇಂದ್ರ ಧರ್ಮು ದೊಡಮನಿ ಹಾಗು ಗೋವಾದ ರಾಜಕುಮಾರ್ ಶಂಕರ್ ಝಾ ಮತ್ತು ಜೈಸಾರಾಂ ಸಮರ್ಥರಾಂ ಕುಮಾವತ್ ಎಂದು ಗುರುತಿಸಲಾಗಿದೆ.
ಗೋವಾದಿಂದ ತಂದಿದ್ದ ಮಾದಕ ವಸ್ತುವನ್ನು ಹುಬ್ಬಳ್ಳಿ ಮುಖಾಂತರ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿತ್ತು.
*
ಐಟಿ ಕಂಪನಿಗಳ ಲಾಭ ಕಡಿತ : ಕಾರ್ನಿಕ್ ಕಳವಳ
ಐಟಿ ಕ್ಷೇತ್ರದಲ್ಲಿ ಲಾಭಗಳಿಕೆಯ ಒತ್ತಡ ಹೆಚ್ಚಾಗುತ್ತಿರುವುದರಿಂದ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಅನೇಕ ಭಾರತೀಯ ಕಂಪನಿಗಳು ಭಾರತದಿಂದ ಕಂಬಿ ಕೀಳಬಹುದು ಎಂದು ನಾಸ್ಕಾಂ ಅಧ್ಯಕ್ಷ ಕಿರಣ್ ಕಾರ್ನಿಕ್ ಎಚ್ಚರಿಸಿದ್ದಾರೆ.
ಎಲ್ಲೆಡೆಯಿಂದ ಕಂಪನಿಗಳು ನಷ್ಟಕ್ಕೀಡಾಗುತ್ತಿವೆ. ರುಪಾಯಿಯ ಮೌಲ್ಯವೃದ್ಧಿ, ಸಂಬಳದ ಹೆಚ್ಚಳ, ಏರುತ್ತಿರುವ ರಿಯಲ್ ಎಸ್ಟೇಟ್ ಬೆಲೆ ಐಟಿ ಕಂಪನಿಗಳ ಲಾಭಾಂಶದ ಮೇಲೆ ವಿಪರೀತ ಪರಿಣಾಮ ಬೀರುತ್ತಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
*
ನೌಕರರಿಗೆ ಎಸ್ಬಿಐನಿಂದ ತರಬೇತಿ ಕಾರ್ಯಕ್ರಮ
ಜಾಗತಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎದುರಾಗಿರುವ ಸ್ಪರ್ಧೆಯಲ್ಲಿ ಮುನ್ನುಗ್ಗುವಂತೆ ನೌಕರರನ್ನು ಸಜ್ಜು ಮಾಡಲು ಎಸ್ಬಿಐ ಪರಿವರ್ತನ ಎಂಬ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ರಾಷ್ಟ್ರಾದ್ಯಂತ ಹಮ್ಮಿಕೊಂಡಿರುವ ಈ ಕಾರ್ಯಕ್ರಮ 100 ದಿನಗಳಲ್ಲಿ ಮುಗಿಯಲಿದೆ ಎಂದು ಎಸ್ಬಿಐ ತಿಳಿಸಿದೆ.
*
ದಲಿತರಿಗಾಗಿ ತ್ವರಿತ ನ್ಯಾಯಾಲಯ ಸ್ಥಾಪನೆಗೆ ಆಗ್ರಹ
ರಾಷ್ಟ್ರದಲ್ಲಿ ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಹೂಡಲಾಗಿರುವ ಕೇಸುಗಳ ಶೀಘ್ರ ವಿಲೇವಾರಿಗೆ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕೆಂದು ಬಿಜೆಪಿಯ ಎಸ್ಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಸತ್ಯನಾರಾಯಣ ಜತಿಯಾ ಕೇಂದ್ರವನ್ನು ಆಗ್ರಹಿಸಿದ್ದಾರೆ.
*
ಬ್ರೂಸ್ ಲೀ ಕಾರ್ ಪ್ಲೇಟಿಗೆ ಲಕ್ಷಾಂತರ ದುಡ್ಡು
ಕುಂಗ್ ಫೂ ಕಿಂಗ್ ಬ್ರೂ ಸ್ ಲೀ ಹೆಸರಿನ ಕಾರ್ ಪ್ಲೇಟ್ ಸುಮಾರು 20 ಲಕ್ಷ ರುಗಳಿಗೆ(5,115 ಡಾಲರ್) ಹರಾಜಾಗಿದೆ.
ಹಾಂಕಾಂಗಿನಲ್ಲಿ ನಡೆದ ಹರಾಜಿನಲ್ಲಿ ನಟ ಬ್ರೂಸ್ ಲೀಯ ಕಟ್ಟಾ ಅಭಿಮಾನಿ ಹಾಂಗ್ ಈ ಕಾರಿನ ನೇಂ ಪ್ಲೇಟ್ ಖರೀದಿಸಿದ್ದಾರೆ. ನೇಂ ಪ್ಲೇಟ್ ಮುಂದೇನು ಮಾಡುವುದು ಎಂಬುದನ್ನು ಬ್ರೂ ಸ್ ಲೀಯವರ ಪತ್ನಿಯವರ ಬಗ್ಗೆ ಚರ್ಚಿಸಲಾಗುವುದು ಎಂದು ಹಾಂಗ್ ಹೇಳಿದ್ದಾರೆ.
***
ಏಷ್ಯಾದ ಬೃಹತ್ ಟೆಲಿಸ್ಕೋಪ್ ನೈನಿತಾಲ್ ನಲ್ಲಿ
ನೈನಿತಾಲ್ ಬಳಿಯ ದೇವಸ್ಥಳದಲ್ಲಿ ಏಷ್ತಾದ ಅತಿದೊಡ್ಡ ಆಪ್ಟಿಕಲ್ ಟೆಲಿಸ್ಕೋಪ್ ಸ್ಥಾಪನೆಯಾಗಲಿದೆ. ಭಾರತದೊಡನೆ ಬೆಲ್ಜಿಯಂ, ರಷ್ಯಾ ಈ ಕಾರ್ಯದಲ್ಲಿ ಕೈ ಜೋಡಿಸಲಿವೆ.
ಸುಮಾರು 120 ಕೋಟಿ ವೆಚ್ಚದ 36 ಮೀಟರ್ ನ ಈ ಟೆಲಿಸ್ಕೋಪ್ ಬಳಸಿ ನಭೋಮಂಡಲವನ್ನು ಇನ್ನಷ್ಟು ಸ್ಪಷ್ಟವಾಗಿ ವೀಕ್ಷಿಸಬಹುದು.
ಬೆಲ್ಜಿಯಂ 2 ದಶಲಕ್ಷ ಯುರೋ ನೆರವು ನೀಡಲಿದೆ. ಅತ್ಯಾಧುನಿಕ ತಂತ್ರಜ್ಞಾನದ ತೆಳುವಾದ ಆಪ್ಟಿಕಲ್ ಮಸೂರವನ್ನು ರಷ್ಯಾ ನೀಡಲಿದೆ ಎಂದು ಆರ್ಯಭಟ ಇನ್ ಸ್ಟಿಟ್ಯೂಟ್ ಆಫ್ ಅನ್ಸರ್ವೇಷನಲ್ ಸೈನ್ಸಸ್ ನಿರ್ದೇಶಕ ಸಾಗರ್ ಹೇಳಿದ್ದಾರೆ.
* * *
ಅಶ್ಲೀಲ ಚಿತ್ರ ಪ್ರದರ್ಶನ: 4 ಜನರ ಬಂಧನ
ನಗರದ ವಿಮಾನ ನಿಲ್ದಾಣದ ಬಳಿಯಿರುವ ರಾಜೇಶ್ವರಿ ಟಾಕೀಸಿಗೆ ನುಗ್ಗಿದ ಕೇಂದ್ರ ಅಪರಾಧಿ ವಿಭಾಗದ ತಂಡ ಥೇಟರ್ ನ ಮಾಲೀಕ ಸುಂದರ್ ರಾಮರೆಡ್ಡಿ ಹಾಗೂ ಇತರ 3 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಶನಿವಾರ ರಾತ್ರಿ 8:15 ರ ಸುಮಾರಿಗೆ ಖಚಿತ ಮಾಹಿತಿಯ ಆಧಾರದ ಮೇಲೆ ಧಾಳಿ ಮಾಡಿದ ಪೊಲೀಸ್ ತಂಡ, ತೆಲುಗು ಚಿತ್ರ ಚಂದ್ರಿಕಾ ಪ್ರದರ್ಶನದ ನಡುವೆ ನೀಲಿ ಚಿತ್ರದ ರೀಲನ್ನು ಓಡಿಸುತ್ತಿದ್ದ ಥೇಟರ್ ಸಿಬ್ಬಂದಿಗಳನ್ನು ಬಂಧಿಸಿದ್ದಾರೆ.