ನಗರದ ಕಸದ ರಾಶಿಯಲ್ಲಿ 21 ಭ್ರೂಣಗಳು :ತನಿಖೆ ಪ್ರಾರಂಭ
ಬೆಂಗಳೂರು, ಆಗಸ್ಟ್ 06: ಶ್ರೀರಾಮಂಪುರದ ಜಕ್ಕರಾಯನಕೆರೆ ಸಮೀಪದ ಕಸದ ರಾಶಿಯಲ್ಲಿ ಭ್ರೂಣಗಳನ್ನು ತುಂಬಿದ್ದ 3 ಚೀಲಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಆದೇಶಿಸಿದೆ.
ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಖಾಸಗಿ ನರ್ಸಿಂಗ್ ಹೋಂನವರ ಕೈವಾಡ ಕಂಡು ಬರುತ್ತದೆ. ಖಾಸಗಿ ನರ್ಸಿಂಗ್ ಹೋಂಗಳ ಮೇಲೆ ನಿಯಂತ್ರಣ ಸಾಧಿಸಲು ಮಾಡಿರುವ ಮಸೂದೆ ಸದನದಲ್ಲಿ ಅಂಗೀಕಾರವಾಗಿದ್ದು, ಇನ್ನೂ ಜಾರಿಯಾಗಬೇಕಿದೆ ಎಂದು ಸರ್ಕಾರದ ಉನ್ನತ ಮೂಲಗಳು ಹೇಳಿವೆ.
ಭ್ರೂಣಗಳು ಪತ್ತೆಯಾದ ಬಗೆ:
ಭಾನುವಾರ ಸಂಜೆ 6: 30 ರ ವೇಳೆಗೆ ಜಕ್ಕರಾಯನಕೆರೆ ಸಮೀಪದ ಸ್ವಾತಿ ಹೋಟೆಲ್ ಸಮೀಪ ಖಾಸಗಿ ವಾಹನವೊಂದು ಬಂದು ಎರಡು ಮೂರು ಚೀಲಗಳನ್ನು ಎಸೆದು ಹೋಯಿತು. ಸ್ವಲ್ಪ ಸಮಯದಲ್ಲಿ ಚೀಲಕ್ಕೆ ಮುತ್ತಿಗೆ ಹಾಕಲು ತೊಡಗಿದ ನಾಯಿ ಹಾಗೂ ಕಾಗೆಗಳ ಆರ್ಭಟ ಕೇಳಿ ಚಿಂದಿ ಶೇಖರಿಸುವವರು ಹಾಗೂ ಸಾರ್ವಜನಿಕರು ಚೀಲವನ್ನು ಬಿಚ್ಚಿ ನೋಡಿದಾಗ ಹಸಿ ಹಸಿ ಭ್ರೂಣಗಳು ಕಂಡು ಕಂಗಾಲಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಭ್ರೂಣಗಳ ಲಿಂಗ ಪರೀಕ್ಷೆಯಾಗದ ಕಾರಣ ಭ್ರೂಣಗಳು ಹೆಣ್ಣು ಅಥವಾ ಗಂಡು ಎಂದು ತಿಳಿದು ಬಂದಿಲ್ಲ.. ಭ್ರೂಣಗಳ ಜತೆಗೆ ಚೀಲಗಳಲ್ಲಿ ಸಿರೆಂಜ್ ಹಾಗೂ ಕುಂದಾಪುರ-ಬೆಂಗಳೂರು ನಡುವಿನ ಪ್ರಯಾಣದ ಟಿಕೆಟ್ ಇತ್ತು. ಭ್ರೂಣಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಶ್ರೀರಾಮಪುರ ಪೊಲೀಸರು ಹೇಳಿದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನೇಸರ್ಗಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)