ಸ್ಥಳೀಯ ಸಂಸ್ಥೆಗಳ ಚುನಾವಣೆಮುಂದೂಡಲ್ಲ : ಎಂ.ಆರ್.ಹೆಗಡೆ
ಬೆಂಗಳೂರು, ಆಗಸ್ಟ್ 05 : ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮುಂದೂಡುವುದಿಲ್ಲ ಎಂದು ರಾಜ್ಯ ಚುನಾವಣಾ ಆಯುಕ್ತ ಎಂ.ಆರ್.ಹೆಗಡೆ ಹೇಳಿದ್ದಾರೆ.
ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಚುನಾವಣೆ ಮಡೆಸಲು ಸರ್ವೋಚ್ಚ ನ್ಯಾಯಾಲಯದ ಸೂಚನೆ ಇದೆ. ಈಗಾಗಲೇ ವೇಳಾಪಟ್ಟಿ ಪ್ರಕಟಗೊಂಡಿದೆ. ಈ ಮೊದಲು ಒಂದು ಸಲ ಚುನಾವಣೆ ಮುಂದೂಡಲಾಗಿದೆ. ಮತ್ತೆ ಮುಂದೂಡುವುದು ಸರಿಯಲ್ಲ ಎಂದು ಅವರು ಹೇಳಿದರು.
ಆಗಸ್ಟ್ ಕೊನೆಯ ವಾರದಲ್ಲಿ ಚುನಾವಣೆ ನಡೆಯುವುದರಿಂದ ಮಳೆಗಾಲ ಕಡಿಮೆಯಾಗಿರುತ್ತದೆ. ಇದಲ್ಲದೆ ನಗರ ಪ್ರದೇಶದಲ್ಲಿ ಮಾತ್ರ ಚುನಾವಣೆ ನಡೆಯುವುದರಿಂದ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಅವರು ಸಮರ್ಥಿಸಿಕೊಂಡರು.
ಎಂ.ಪಿ.ಪ್ರಕಾಶ್ ಟೀಕೆ : ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹಸಚಿವ ಎಂ.ಪಿ.ಪ್ರಕಾಶ್, ಆಯೋಗವು ಚುನಾವಣೆ ದಿನಾಂಕ ನಿಗದಿಪಡಿಸುವ ಮುನ್ನ ರಾಜ್ಯದ ವಸ್ತುಸ್ಥಿತಿ ಅರ್ಥಮಾಡಿಕೊಳ್ಳಬೇಕಿತ್ತು ಎಂದು ಟೀಕಿಸಿದ್ದಾರೆ.
ಆದರೆ ಚುನಾವಣೆ ಮುಂದೂಡುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
(ಏಜನ್ಸೀಸ್)